ಉಡುಪಿ: ತೌಕ್ತೆ ಚಂಡಮಾರುತದ ಹಾನಿ ವೀಕ್ಷಿಸಿದ ಕೇಂದ್ರ ತಂಡ

Update: 2021-06-17 14:56 GMT

ಉಡುಪಿ/ಪಡುಬಿದ್ರಿ, ಜೂ.17: ಜಿಲ್ಲೆಯಲ್ಲಿ ಕಳೆದ ತಿಂಗಳು ಬೀಸಿದ ತೌಕ್ತೆ ಚಂಡ ಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಕೇಂದ್ರ ವಿಪತ್ತು ನಿರ್ವಹಣಾ ತಂಡ, ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿತಲ್ಲದೇ ಹಾನಿಯ ಪ್ರಮಾಣವನ್ನು ಪರಿಶೀಲಿಸಿತು.

ಬುಧವಾರ ಉತ್ತರ ಕನ್ನಡ ಜಿಲ್ಲೆಯ ಸಮೀಕ್ಷೆ ನಡೆಸಿದ್ದ ತಂಡ, ಇಂದು ಉಡುಪಿ ಜಿಲ್ಲೆಗೆ ಆಗಮಿಸಿ ಬೈಂದೂರು ಹಾಗೂ ಕಾಪು ತಾಲೂಕುಗಳಲ್ಲಿ ಅಧಿಕ ಹಾನಿ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿತು.

ಕೇಂದ್ರ ತಂಡದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸೂಪರಿಟೆಂಡೆಂಟ್ ಇಂಜನಿಯರ್ ಸದಾನಂದ ಬಾಬು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪೊನ್ನುಸ್ವಾಮಿ ಇವರೊಂದಿಗೆ ರಾಜ್ಯ ವಿಪತ್ತು ನಿರ್ವಹಣ ವಿಭಾಗದ ಆಯುಕ್ತ ಮನೋಜ್ ರಾಜನ್ ಹಾಗೂ ವಿಪತ್ತು ನಿರ್ವಹಣಾ ವಿಭಾಗದ ಹಿರಿಯ ವಿಜ್ಞಾನಿ ಡಾ.ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು.

ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಎಸ್‌ಸಿ ಕಾಲನಿಗೆ ಭೇಟಿ ನೀಡಿದ ತಂಡ ಅಲ್ಲಿನ ಎಂಟು ದಲಿತರ ಮನೆಗಳಿಗೆ ಆದ ಹಾನಿಯನ್ನು ಪರಿಶೀಲನೆ ನಡೆಸಿತು. ಇಲ್ಲಿ ಗಾಳಿ-ಮಳೆಗೆ ಎರಡು ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಉಳಿದ ಆರು ಮನೆಗಳಿಗೆ ಭಾಗಶ: ಹಾನಿಯಾಗಿತ್ತು. ಅಲ್ಲದೇ ತಂಡ ತಾಲೂಕಿನ ಉಪ್ಪುಂದ, ಮೆಡಿಕಲ್ನಲ್ಲಿ ಕಡಲ ಕೊರೆತದಿಂದ ಆದ ಹಾನಿ, ಮರವಂತೆಯಲ್ಲಿ ಕಾಂಕ್ರಿಟ್ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿರುವುದನ್ನು ವೀಕ್ಷಿಸಿತು. ಹಾಳಾಗಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ಮರು ನಿರ್ಮಿಸಲಾಗುತ್ತಿದೆ.

 ಅಲ್ಲದೇ ತಂಡ ತಾಲೂಕಿನ ಉಪ್ಪುಂದ, ಮಡಿಕಲ್ ನಲ್ಲಿ ಕಡಲ ಕೊರೆತದಿಂದ ಆದ ಹಾನಿ, ಮರವಂತೆಯಲ್ಲಿ ಕಾಂಕ್ರಿಟ್ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿರುವುದನ್ನು ವೀಕ್ಷಿಸಿತು. ಹಾಳಾಗಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ಮರು ನಿರ್ಮಿಸಲಾಗುತ್ತಿದೆ. ಬಳಿಕ ತಂಡ ಕಾಪು ಹಾಗೂ ಪಡುಬಿದ್ರಿಗಳಿಗೆ ಭೇಟಿ ನೀಡಿತು. ಕಾಪು ಲೈಟ್ ಹೌಸ್, ಕೈಪುಂಜಾಲು, ಪಡುಬಿದ್ರೆ ಬೀಚ್ ಮತ್ತು ಬ್ಲೂಫ್ಲ್ಯಾಗ್ ಬೀಚ್‌ಗೆ ಭೇಟಿ ನೀಡಿದ ತಂಡ ಅಲ್ಲಿ ಚಂಡಮಾರುತದ ಅಬ್ಬರದಲ್ಲಿ ಆಗಿರುವ ಹಾನಿಯ ಪರಿಶೀಲನೆ ನಡೆಸಿತು.

209 ಕೋಟಿ ರೂ. ಹಾನಿ ಅಂದಾಜು:  ಕಳೆದ ತಿಂಗಳು ಉಂಟಾದ ತೌಕ್ತೆ ಚಂಡಮಾರುತದಿಂದ ಕರ್ನಾಟಕ ಕರಾವಳಿ ಪ್ರದೇಶಕ್ಕೆ ಸುಮಾರು 209ಕೋಟಿ ರೂ. ಹಾಗೂ ಸೊತ್ತು ಹಾನಿಯ ರೂಪದಲ್ಲಿ 10.69ಕೋಟಿ ರೂ. ಗಳ ನಷ್ಟವು ಉಂಟಾಗಿದೆ ಎಂದು ರಾಜ್ಯ ಸರಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದೆ ಎಂದು ಕರ್ನಾಟಕದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಮನೋಜ್ ರಾಜನ್ ಪಡುಬಿದ್ರಿಯಲ್ಲಿ ತಿಳಿಸಿದರು.

ಕೇಂದ್ರದ ಗೃಹ ಮಂತ್ರಾಲಯದ ಸುಶೀಲ್‌ಪಾಲ್ ನೇತೃತ್ವದಲ್ಲಿ ವಿತ್ತ, ಕೃಷಿ, ಕ್ರೀಡೆ, ವಿದ್ಯುತ್ ಇಲಾಖೆಗಳ ಮುಖ್ಯಸ್ಥರೂ ಸದಸ್ಯರಾಗಿರುವ ಕೇಂದ್ರ ತಂಡವು ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸಲಿದೆ. ಮಲೆನಾಡು, ಘಟ್ಟ ಪ್ರದೇಶಗಳಲ್ಲಿ ಸುಮಾರು 300 ಕಿಮೀ. ರಸ್ತೆಯೂ ಹಾನಿಗೊಳಗಾಗಿದೆ. ತಂಡ ಇಂದು ಕರಾವಳಿಯ ಹಾನಿಯ ಅಂಶಗಳನ್ನು ಪರಿಶೀಲಿಸಲಿದೆ.

ಕರಾವಳಿ ಭೇಟಿ ಬಳಿಕ ತಂಡ ಚಿಕ್ಕಮಗಳೂರು ಮುಂತಾದ ಭಾಗಗಳಿಗೆ ಭೇಟಿ ನೀಡಲಿದ್ದು ಕೇಂದ್ರ ವೀಕ್ಷಕರ ತಂಡದ ನಿರ್ಧಾರ, ವರದಿಯನ್ನು ಅನುಸರಿಸಿ ರಾಜ್ಯ ಪರಿಹಾರವನ್ನು ಪಡೆಯಲಿದೆ ಎಂದು ಮನೋಜ್ ರಾಜನ್ ತಿಳಿಸಿದರು.

ಬ್ಲೂ ಫ್ಲ್ಯಾಗ್ ಬೀಚ್ ಅಭಿವೃದ್ಧಿ: ತೌಕ್ತೇ ಚಂಡಮಾರುತದಿಂದ ಹಾನಿಗೊಳಗಾಗಿರುವ ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್‌ನ ದುರಸ್ತಿ ಮತ್ತು ನವೀಕರಣಕ್ಕಾಗಿ ಈಗಾಗಲೇ ರಾಜ್ಯ ಪ್ರವಾಸೋದ್ಯಮ ಇಲಾಖೆ 50 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ರವಾನಿಸಿದೆ. ಅದನ್ನು ಬಳಸಿಕೊಂಡು ಈ ಪ್ರದೇಶವನ್ನು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಲ್ಲಿ ಮತ್ತೆ ಅಭಿವೃದ್ಧಿಗೊಳಿಸಲಾಗುವುದೆಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಚಂಡಮಾರುತದಿಂದ ಹಾನಿಗೊಳಗಾದ ಕಾಪು ತಾಲೂಕಿನ ಕೈಪುಂಜಾಲು, ಕಾಪು ಬೀಚ್, ಪಡುಬಿದ್ರಿಯ ನಡಿಪಟ್ಣ, ಬ್ಲೂಫ್ಲ್ಯಾಗ್ ಬೀಚ್‌ಗೆ ಭೇಟಿ ನೀಡಿದ ತಂಡ ಪರಿಶೀಲನೆ ನಡೆಸಿತು.

ತಂಡದ ಜಿಲ್ಲಾ ಭೇಟಿಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷಿ, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಕಾಪು ತಹಶೀಲ್ದಾರ್ ಪ್ರತಿಭಾ ಆರ್., ಎಎಸ್ಪಿ ಕುಮಾರಚಂದ್ರ, ಕಾಪು ವೃತ್ತನಿರೀಕ್ಷಕ ಪ್ರಕಾಶ್, ಕಾಪು ಕಂದಾಯ ಪರೀವೀಕ್ಷಕ ಅಧಿಕಾರಿ ಸುಧೀರ್ ಶೆಟ್ಟಿ, ಗ್ರಾಮ ಲೆಕ್ಕಿಗ ಶ್ಯಾಮ್‌ಸುಂದರ್, ಗ್ರಾಮ ಸಹಾಯಕ ಜಯರಾಮ್, ಕರಾವಳಿ ಕಾವಲು ಪೊಲೀಸ್ ಠಾಣೆಯ ಎಎಸ್‌ಐ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News