ಎಪಿಸಿಆರ್ ನಿಯೋಗದಿಂದ ಕೊಲೆಯಾದ ಉದಯ ಗಾಣಿಗ ಕುಟುಂಬದ ಭೇಟಿ

Update: 2021-06-19 15:52 GMT

ಶಂಕರನಾರಾಯಣ, ಜೂ.19: ಯಡಮೊಗೆಯಲ್ಲಿ ಕೊಲೆಯಾದ ಉದಯ ಗಾಣಿಗ ಅವರ ಕುಟುಂಬವನ್ನು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಉಡುಪಿ ಜಿಲ್ಲಾ ಇದರ ಸತ್ಯ ಶೋಧನಾ ನಿಯೋಗವು ಇಂದು ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿಯನ್ನು ಕಲೆ ಹಾಕಲಾಯಿತು.

ಈ ಸಂಬಂಧ ಪ್ರತಿಕ್ರಿಯಿಸಿರುವ ಎಪಿಸಿಆರ್ ಜಿಲ್ಲಾ ಹೊಣೆಗಾರ ಹುಸೇನ್ ಕೋಡಿಬೆಂಗ್ರೆ, ಕೊಲೆಯಾದ ಉದಯ ಗಾಣಿಗ ಅವರ ಮನೆಗೆ ತೆರಳಿ ಪತ್ನಿ ಜ್ಯೋತಿ ಮತ್ತು ಕುಟುಂಬ ಸದಸ್ಯರಿಂದ ಘಟನೆಯ ಕುರಿತಾದ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಸ್ಥಳೀಯರಿಂದಲೂ ಈ ಕೊಲೆ ಪ್ರಕರಣದ ಹಲವು ಸಂಗತಿಗಳನ್ನು ಸಂಗ್ರಹಿಸಲಾಗಿದ್ದು, ಈ ಬಗ್ಗೆ ಶೀಘ್ರದಲ್ಲಿ ಸತ್ಯ ಶೋಧನ ತಂಡ ವರದಿಯೊಂದನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸ ಲಾಗುವುದು ಎಂದರು.

ಈ ಪ್ರಕರಣದಲ್ಲಿ ಸ್ಥಳೀಯ ಪ್ರಭಾವಿ ರಾಜಕಾರಣಿಗಳಾದ ಪ್ರಾಣೇಶ್ ಯಾಡಿಯಾಳ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದು ತನಿಖೆಯ ದಿಕ್ಕು ತಪ್ಪದಂತೆ ಸಂಬಂಧ ಪಟ್ಟ ಆಯೋಗಗಳಿಗೂ ವರದಿ ಸಲ್ಲಿಸಲಾಗುವುದು. ಕುಟುಂಬದ ಏಕೈಕ ಅರ್ಥಿಕ ಆಧಾರ ಸ್ತಂಭವಾಗಿರುವ ಉದಯ ಗಾಣಿಗರನ್ನು ಕಳೆದುಕೊಂಡ ಕುಟುಂಬಕ್ಕೆ ತಕ್ಷಣ ಸರಕಾರ 50ಲಕ್ಷ ರೂ. ಪರಿಹಾರ ನೀಡಬೇಕಾ ಗಿದೆ. ಈ ಕುರಿತಂತೆ ಕಾನೂನಾತ್ಮಕ ಹೋರಾಟ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.

ನಿಯೋಗದಲ್ಲಿ ಆನಂದ್ ಕಾರಂದೂರು, ಇದ್ರೀಸ್ ಹೂಡೆ, ಅಝೀಝ್ ಉದ್ಯಾವರ, ಪ್ರಸಾದ್ ಕಾಂಚನ್, ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News