ಕೇಂದ್ರದ ಏಜೆನ್ಸಿಗಳು ಕಿರುಕುಳ ನೀಡುತ್ತಿವೆ, ನಾವು ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸುವುದು ಒಳಿತು: ಶಿವಸೇನೆ ಶಾಸಕ

Update: 2021-06-20 12:55 GMT

ಮುಂಬೈ: ಕೇಂದ್ರ ತನಿಖಾ ಸಂಸ್ಥೆಗಳ ಕಿರುಕುಳದಿಂದ ತನ್ನ ನಾಯಕರನ್ನು ರಕ್ಷಿಸಲು ಪಕ್ಷ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಬೇಕು ಎಂದು ಶಿವಸೇನೆ ಶಾಸಕರೊಬ್ಬರು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ, ಶಾಸಕ ಪ್ರತಾಪ್ ಸರ್ನಾಯಕ್, ಮಾಜಿ ಮಿತ್ರಪಕ್ಷಗಳು ಇನ್ನೂ ವಿಳಂಬ ಮಾಡದೇ ಮತ್ತೆ ಒಂದಾಗಬೇಕು. ವಿಶೇಷವಾಗಿ ಮುಂಬೈ ಹಾಗೂ ಥಾಣೆ ಸೇರಿದಂತೆ ಮುಂಬರುವ ಅನೇಕ ನಗರಪಾಲಿಕೆ  ಚುನಾವಣೆಗಳಿಗೆ ಮೊದಲು ಮೈತ್ರಿ ಏರ್ಪಡಬೇಕೆಂದು ಸಲಹೆ ನೀಡಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಥಾಣೆ ಜಿಲ್ಲೆಯ ಓವಾಲಾ-ಮಾಜಿವಾಡಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸರ್ನಾಯಕ್, ಬಿಜೆಪಿ ಮತ್ತು ಶಿವಸೇನೆ ಇನ್ನು ಮುಂದೆ ಮಿತ್ರಪಕ್ಷಗಳಲ್ಲದಿದ್ದರೂ, ಉಭಯ ಪಕ್ಷಗಳ ನಾಯಕರು ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಹಾಗೂ ನಾವು ಇದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

"ಹಲವಾರು ಕೇಂದ್ರ ಏಜೆನ್ಸಿಗಳು ನನ್ನ ಮತ್ತು ಇತರ ಶಿವಸೇನೆ ನಾಯಕರಾದ ಅನಿಲ್ ಪರಬ್ ಹಾಗೂ ರವೀಂದ್ರ ವೈಕರ್ ಅವರ ಹಿಂದೆ ಬಿದ್ದಿವೆ. ಶಾಸಕರು ಹಾಗೂ  ಅವರ ಕುಟುಂಬಗಳಿಗೆ ಕಿರುಕುಳ ನೀಡಲಾಗುತ್ತಿದೆ. ಶಿವಸೇನೆಯ ನಾಯಕರನ್ನು ಸಮಸ್ಯೆಗಳಿಂದ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮತ್ತೆ ಕೈಜೋಡಿಸುವುದು ಉತ್ತಮ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ) ಕಳೆದ ವರ್ಷ ಸರ್ ನಾಯಕ್ ಗೆ ಸೇರಿದ ಹಲವಾರು ಆಸ್ತಿಗಳ ಮೇಲೆ ದಾಳಿ ನಡೆಸಿತ್ತು. ಅವರ ಮಗ ವಿಹಾಂಗ್ ಸರ್ನಾಯಕ್ ಅವರನ್ನೂ ಏಜೆನ್ಸಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News