ಸಣ್ಣಪುಟ್ಟ ಅಂಗಡಿಗಳು ತೆರೆಯಲು ಅವಕಾಶ ನೀಡಿ: ಕಾಂಗ್ರೆಸ್
Update: 2021-06-20 20:02 IST
ಉಡುಪಿ, ಜೂ.20: ಕಳೆದ 50 ದಿನಗಳಿಂದ ಕೋವಿಡ್ ನಿಯಂತ್ರಣಕ್ಕಾಗಿ ಜಾರಿಯಾದ ನಿರ್ಬಂಧಗಳಿಂದ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತ ಗೊಂಡಿದ್ದು ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದುದರಿಂದ ಆಯ್ದ ಇತರ ಅಗತ್ಯ ವಸ್ತುಗಳ ಅಂಗಡಿಗಳಿಗೆ ಪರ್ಯಾಯ ದಿನಗಳಂತೆ ತೆರೆಯಲು ಅನುಮತಿ ನೀಡಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡ ವೂರು, ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಬಟ್ಟೆ ಮಳಿಗೆಗಳಲ್ಲಿ ಹಾಗೂ ಇನ್ನಿತರ ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ನೌಕರಿಯಿಲ್ಲದೆ ದಿನನಿತ್ಯದ ಅಗತ್ಯಗಳನ್ನು ಪೂರೈಸುವುದು ಕಷ್ಟಕರವಾಗಿದೆ. ಸಾಮಾನ್ಯ ಜನರನ್ನೂ ಗಮನದಲ್ಲಿಟ್ಟುಕೊಂಡು ಈಗಾಗಲೇ ಕೆಲವು ವ್ಯಾಪಾರಗಳಿಗೆ ವಿನಾಯಿತಿ ನೀಡಲಾಗಿದ್ದು ಇನ್ನುಳಿದ ಸಣ್ಣ ಪುಟ್ಟ ಅಂಗಡಿ ಮಾಲಿಕರು ವ್ಯಾಪಾರ ಸ್ಥಗಿತಗೊಂಡು ಯಾವ ರೀತಿ ಜೀವನ ನಿರ್ವಹಣೆ ಮಾಡಬೇಕೆಂದು ತೋಚದ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.