​ದ.ಕ.ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವುಗೊಳಿಸಲು ಡಿವೈಎಫ್‌ಐ ಆಗ್ರಹ

Update: 2021-06-21 18:06 GMT

ಮಂಗಳೂರು, ಜೂ.21: ಕೊರೋನ ಪಾಸಿಟಿವಿಟಿ ದರ ಶೇ.5ಕ್ಕೆ ಇಳಿದಿರುವುದರಿಂದ ಬೆಂಗಳೂರು, ಉಡುಪಿ ಸಹಿತ ರಾಜ್ಯದ 22 ಜಿಲ್ಲೆಗಳಲ್ಲಿ ಮಾಡಿರುವಂತೆ ದ.ಕ.ಜಿಲ್ಲೆಯಲ್ಲಿಯೂ ಲಾಕ್‌ಡೌನ್ ತೆರವುಗೊಳಿಸಿ ಪೂರ್ಣಪ್ರಮಾಣದ ವಾಣಿಜ್ಯ ಚಟುವಟಿಕೆ, ದುಡಿಮೆಗೆ ಅವಕಾಶ ಮಾಡಿಕೊಡುವಂತೆ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.

ಪಾಸಿಟಿವಿಟಿ ದರ ಶೇ.5ಕ್ಕೆ ಇಳಿದಿರುವ ಮಾನದಂಡದಲ್ಲಿ ಬೆಂಗಳೂರು ನಗರ ಸಹಿತ 16 ಜಿಲ್ಲೆಗಳಲ್ಲಿ ಲಾಕ್‌ಡೌನ್ ತೆರವುಗೊಳಿಸಲಾಗಿತ್ತು. ಅದಲ್ಲದೆ ಉಡುಪಿ, ಶಿವಮೊಗ್ಗ ಸಹಿತ ಮತ್ತೆ ಆರು ಜಿಲ್ಲೆಗಳ ಜನಪ್ರತಿನಿನಿಧಿಗಳ ಒತ್ತಾಯ, ಪಾಸಿಟಿವಿಟಿ ದರದ ಆಧಾರದಲ್ಲಿ ಲಾಕ್‌ಡೌನ್ ತೆರವುಗೊಳಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ದ.ಕ.ಜಿಲ್ಲೆಯಲ್ಲೂ ಪಾಸಿಟಿವಿಟಿ ದರ ಶೇ.5ಕ್ಕೆ ಇಳಿದಿದೆ. ಆದರೆ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಹೊರತು ಪಡಿಸಿ ಉಳಿದ ವಾಣಿಜ್ಯ ವ್ಯವಹಾರ, ಸಾರ್ವಜನಿಕ ಸಾರಿಗೆಗೆ ನಿರ್ಬಂಧ ಮುಂದುವರಿಸಿರುವುದು, ಅಗತ್ಯ ವಸ್ತುಗಳ ಖರೀದಿ ಮಧ್ಯಾಹ್ನ ಒಂದು ಗಂಟೆಗೆ ಮಿತಿಗೊಳಿಸಿರುವುದು ತಾರತಮ್ಯವಾಗಿದೆ. ಅಲ್ಲದೆ ಜಿಲ್ಲೆಯ ಜನಪ್ರತಿನಿಧಿಗಳ ವೈಫಲ್ಯ ಹಾಗೂ ಜನರ ಬದುಕಿನ ಸಂಕಷ್ಟಗಳ ಕುರಿತಾದ ಸರಕಾರದ ಅನಾದಾರವನ್ನು ಎತ್ತಿ ತೋರಿಸುತ್ತದೆ. ರಾಜ್ಯದ ಉಳಿದ ಜಿಲ್ಲೆಗಳಿಗೆ ಅನ್ವಯಿಸಿರುವ ಮಾನದಂಡ ದ.ಕ. ಜಿಲ್ಲೆಯ ಮಟ್ಟಿಗೆ ಅನ್ವಯಗೊಳ್ಳದಿರುವುದು ದ.ಕ.ಜಿಲ್ಲಾಡಳಿತ, ಜನಪ್ರತಿನಿಧಿಗಳ ನಡವಳಿಕೆ ಪ್ರಶ್ನಾರ್ಹ.

ಲಾಕ್‌ಡೌನ್ ವಿನಾಯತಿಗಳು ನಿರ್ಮಾಣ ಕಾಮಗಾರಿ ಸಹಿತ ಎಲ್ಲಾ ವಲಯದ ಅಸಂಘಟಿತ ಕಾರ್ಮಿಕರ ದುಡಿಮೆಯ ಅವಕಾಶಗಳಿಗೆ ಯಾವ ರೀತಿಯಲ್ಲೂ ಅನುಕೂಲಕರವಾಗಿಲ್ಲ. ಜವಳಿ, ಚಪ್ಪಲಿ, ಗಾರ್ಮೆಂಟ್ಸ್, ಶೃಂಗಾರ, ಉಡುಗೊರೆ ಸಾಧನಗಳ ಸಹಿತ ಸಣ್ಣ ಪುಟ್ಟ ವ್ಯಾಪಾರಿ ಮಳಿಗೆ, ಅಂಗಡಿಗಳನ್ನು ನಡೆಸುವ ವ್ಯಾಪಾರಿಗಳು, ಅದರಲ್ಲಿನ ನೌಕರರು ಲಾಕ್‌ಡೌನ್ ಮುಂದುವರಿಕೆಯಿಂದ ದಿವಾಳಿ ಸ್ಥಿತಿಗೆ ತಲುಪಿದ್ದಾರೆ. ಖಾಸಗಿ ಬಸ್ ಸೇರಿದಂತೆ ಪ್ರಯಾಣ ಸಾರಿಗೆಯ ಮಾಲಕರು, ಕಾರ್ಮಿಕರು ಜಿಲ್ಲೆಯಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿದ್ದು, ಅವರ ಬದುಕು ಬೀದಿಗೆ ಬಂದಿದೆ.

ಪಾಸಿಟಿವಿಟಿ ದರ ಶೇ.5ಕ್ಕೆ ಇಳಿದಿದ್ದರೂ ಕೂಡ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಸೋಮಾರಿತನ ಬಿಟ್ಟು ಜನರ ಸಂಕಷ್ಟಗಳ ಕುರಿತಾದ ನಿರ್ಲಕ್ಷ್ಯ ಧೋರಣೆಯನ್ನು ಬದಲಾಯಿಸಿ ರಾಜ್ಯ ಸರಕಾರಕ್ಕೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ತಕ್ಷಣದಿಂದಲೇ ಜಿಲ್ಲೆಯ ಲಾಕ್‌ಡೌನ್ ತೆರವುಗೊಳಿಸಲು ಮುಂದಾಗಬೇಕು ಎಂದು ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮತ್ತು ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News