ಕಾರ್ಕಳ: ಶಾಸಕ ಕಚೇರಿ ಮುಂದೆ ಜನಾಗ್ರಹ ಪ್ರತಿಭಟನೆ, ಪೊಲೀಸರಿಂದ ತಡೆ

Update: 2021-06-22 08:32 GMT

ಕಾರ್ಕಳ, ಜೂ.22: ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ ವತಿಯಿಂದ ಮಂಗಳವಾರ ಕಾರ್ಕಳ ಶಾಸಕರ ಖಾಸಗಿ ಕಚೇರಿ ವಿಕಾಸದ ಮುಂದೆ ಜನಾಗ್ರಹ ಪ್ರತಿಭಟನೆ ನಡೆಯಿತು. ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶಾಸಕರಿಗೆ ಮನವಿ ಮಾಡುವ ಕಾಂಗ್ರೆಸ್ ಪ್ರಯತ್ನಕ್ಕೆ ಪೊಲೀಸರು ತಡೆ ಒಡ್ಡಿದರು.

ಶಾಸಕರ ವಿಕಾಸ ಕಚೇರಿ ಮುಂದೆ ಕಾಂಗ್ರೆಸ್ ನ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮನವಿ ನೀಡಲು ಕಚೇರಿ ಹತ್ತಿರಕ್ಕೆ ತೆರಳಲು ಯತ್ನಿಸಿದಾಗ ಪೊಲೀಸರು ತಡೆದರು.

ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಅವರು ವಿಕಾಸ ಕಚೇರಿ ಶಾಸಕರ ಖಾಸಗಿ ಕಚೇರಿ ಹೀಗಾಗಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಜತೆಗೆ ಕೊರೋನ ಸಂಕಷ್ಟ ಸಮಯದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನಾ ನಿರತರಲ್ಲಿ ಮನವಿ ಮಾಡಿದರು. ಇದಕ್ಕೆ ಕಾಂಗ್ರೆಸ್ ಮುಖಂಡರಿಂದ ಪ್ರತಿರೋಧ ವ್ಯಕ್ತವಾಯಿತು.

ಶಾಸಕರು ಇರುವ ಕಚೇರಿ ಜನರ ಸಮಸ್ಯೆಗಳು, ಸಂಕಷ್ಟ, ಬೇಡಿಕೆ ಈಡೇರಿಸಲು ಕ್ರಮ ವಹಿಸಬೇಕು ಇದು ಜನಾಗ್ರಹ. ಶಾಸಕರು ಕಚೇರಿಯೊಳಗೆ ಇರುವುದರಿಂದ ನಮಗೆ ಅವಕಾಶ ಮಾಡಿಕೊಡಬೇಕು. ಕೋವಿಡ್ ನಿಯಮ ಉಲ್ಲಂಘಿಸಿ ಬಿಳಿಬೆಂಡೆ ವಿತರಣೆ ಮಾಡಲು ಬಿಜೆಪಿಯವರಿಗೆ ಅವಕಾಶ ಕಲ್ಪಿಸುವುದಾದರೆ ನಮಗ್ಯಾಕೆ  ಪ್ರತಿಭಟನೆ, ಜನ ಸೇರಲು ನಿರಾಕರಿಸುತ್ತೀರಿ ಎಂದು ಕಾಂಗ್ರೆಸ್ ಮುಖಂಡರಾದ ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಶುಭದ ರಾವ್, ಬಿಪಿನ್ ಚಂದ್ರಪಾಲ್ ನಕ್ರೆ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕೇಂದ್ರ, ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಶಾಸಕರ ವಿಕಾಸ ಕಚೇರಿ ಮುಂಭಾಗದ 25 ಮೀ.ದೂರದಲ್ಲಿ ಪ್ರತಿಭಟನೆ ಸಭೆ ನಡೆಸಿ ಜನರ ಬೇಡಿಕೆಗಳಿಗೆ ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಜನ ವಿರೋಧಿ ನೀತಿ ಆಡಳಿತ ವೈಫಲ್ಯ ಮತ್ತು ಲಾಕ್ ಡೌನ್ ನಿಂದ ಸಂತ್ರಸ್ತರಾದ ಕಾರ್ಮಿಕ ಶ್ರಮಿಕ ವರ್ಗದವರಿಗೆಂದು ಘೋಷಿಸಿರುವ ಪ್ಯಾಕೇಜ್ ಪಡೆಯಲು ವಿಧಿಸಲಾಗಿರುವ ಶರತ್ತುಗಳ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News