ಮಂಗಳೂರು ಕ್ಲಾಕ್ ಟವರ್ ಬಳಿ ವಾಹನಗಳ ತಪಾಸಣೆ : ಅನಗತ್ಯವಾಗಿ ತಿರುಗುವವರ ವಿರುದ್ಧ ಪ್ರಕರಣ ದಾಖಲು

Update: 2021-06-22 10:39 GMT

ಮಂಗಳೂರು, ಜೂ. 22: ಕಳೆದ ಕೆಲ ದಿನಗಳಿಂದ ನಗರದಲ್ಲಿ ಲಾಕ್‌ಡೌನ್ ವಿನಾಯಿತಿ ಅವಧಿಯಲ್ಲಿ ವಾಹನಗಳ ದಟ್ಟಣೆ ಕಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಇಂದು ನಗರದ ಕ್ಲಾಕ್ ಟವರ್ ಬಳಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರು ದಿಢೀರ್ ತಪಾಸಣೆ ನಡೆಸಿದರು.

ಸೋಮವಾರದಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಲಾಗಿದ್ದು, ಈ ಸಮಯದಲ್ಲಿಯೂ ನಗರಾದ್ಯಂತ ವಾಹನಗಳ ಓಡಾಟ ಹೆಚ್ಚಾಗಿತ್ತು. ಇದರಿಂದಾಗಿ ಇಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಎಸಿಪಿಗಳಾದ ರಂಜಿತ್ ಕುಮಾರ್ ಹಾಗೂ ನಟರಾಜ್ ಅವರ ನೇತೃತ್ವದಲ್ಲಿ ಕ್ಲಾಕ್ ಟವರ್ ಬಳಿಕ ವಾಹನಗಳನ್ನು ತಡೆದು ತಪಾಸಣೆ ನಡೆಸಿದರು.

ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿದ್ದವರ ಮೇಲೆ ದಂಡ ಹಾಕಿದರೆ, ಕಾರುಗಳಲ್ಲಿ ನಿಷೇಧಿತ ಟಿಂಟ್‌ಗಳನ್ನು ಹಾಕಿದ್ದನ್ನು ಪೊಲೀಸರೇ ಸ್ವತಹ ತೆಗೆದು ದಂಡ ವಿಧಿಸಿದರು.

ವಿನಾಯಿತಿ ಅವಧಿಯಲ್ಲೇ ವಾಹನ ತಡೆದರು !

ಅಗತ್ಯ ವಸ್ತುಗಳ ಖರೀದಿಗೆ ದ.ಕ. ಜಿಲ್ಲಾಡಳಿತ 2 ಗಂಟೆಯವರೆಗೂ ಸಮಯ ನೀಡಿದ್ದರೂ ಪೊಲೀಸರು ಮಧ್ಯಾಹ್ನ 12.15ರ ವೇಳೆಗೆ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದಾರೆ ಎಂಬ ಆಕ್ಷೇಪವೂ ಈ ಸಂದರ್ಭ ವಾಹನ ಸವಾರರಿಂದ ವ್ಯಕ್ತವಾಯಿತು.

ನಗರದ ಪುರಭವನದ ಎದುರಿನಿಂದ ಕ್ಲಾಕ್‌ ಟವರ್‌ಗೆ ಸಾಗುವ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಡಿ ನಡೆಯುತ್ತಿರುವುದರಿಂದ ಒಂದು ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಇರುವ ಕಾರಣ ಪೊಲೀಸರ ತಪಾಸಣೆ ವೇಳೆ ವಾಹನಗಳು ಈ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.

ಲಾಕ್‌ಡೌನ್ ವಿನಾಯಿತಿ ಅವಧಿಯಲ್ಲಿಯೂ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿರ್ದೇಶನವನ್ನು ಸರಕಾರ ನೀಡಿದೆ. ಅದನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಮೂಲಕ ತಪಾಸಣೆ ಮಾಡಲಾಗುತ್ತಿದೆ. ಒಳ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುವರನ್ನು ಕೂಡಾ ಮೊಬೈಲ್ ಸ್ಕ್ವಾಡ್‌ಗಳ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ಕೊರೋನ 2ನೆ ಅಲೆ ಲಾಕ್‌ಡೌನ್ ಬಳಿಕ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 22000 ಅಧಿಕ ಮಾಸ್ಕ್ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 300ಕ್ಕೂ ಅಧಿಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 3000ದಷ್ಟು ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.

ವೃದ್ಧ ದಂಪತಿಯನ್ನು ಪೊಲೀಸ್ ವಾಹನದಲ್ಲಿ ಮನೆ ತಲುಪಿಸಿದ ಕಮಿಷನ್

ಕ್ಲಾಕ್ ಟವರ್ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ತಮ್ಮ ಬಳಿ ಸಹಾಯ ಕೇಳಿ ಬಂದ ವೃದ್ಧ ದಂಪತಿಯನ್ನು ಪೊಲೀಸ್ ವಾಹನದಲ್ಲೇ ತಮ್ಮ ಮನೆಗೆ ತಲುಪಿಸುವಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸಹಕರಿಸಿದರು.

ಅಗತ್ಯ ವಸ್ತುಗಳ ಖರೀದಿಗೆ ನಗರಕ್ಕೆ ಬಂದಿದ್ದ ಹಿರಿಯ ನಾಗರಿಕರಾದ ರಾಮದಾಸ್ ಕಾಮತ್ ಹಾಗೂ ಪತ್ನಿ ಕುಲಶೇಖರದ ಮನೆಗೆ ಹಿಂತಿರುಗಲು ಸುಮಾರು ಎರಡು ಗಂಟೆ ಕಾಲ ಆಟೋರಿಕ್ಷಾಕ್ಕಾಗಿ ಕಾದರೂ ಯಾರೊಬ್ಬರೂ ಅಲ್ಲಿಗೆ ಬಾಡಿಗೆ ಬರಲು ಒಪ್ಪಲಿಲ್ಲ ಎಂದು ಕಮಿಷನರ್ ಬಳಿ ಸಮಸ್ಯೆ ತೋಡಿಕೊಂಡರು.
ಕಾಲು ನೋವಿನ ಸಮಸ್ಯೆಯೂ ಹೊಂದಿದ್ದ ರಾಮದಾಸ್ ಹಾಗೂ ಅವರ ಪತ್ನಿಯ ಸಮಸ್ಯೆಗೆ ಮರುಗಿದ ಕಮಿಷನರ್ ಪೊಲೀಸ್ ವಾಹನದಲ್ಲಿ ಅವರನ್ನು ಮನೆಗೆ ತಲುಪಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ಆಟೋರಿಕ್ಷಾಗಳವರು ಕೆಲವೊಂದು ನಿಗದಿತ ರೂಟ್‌ಗಳಲ್ಲಿ ಮಾತ್ರ ಸಂಚರಿಸುತ್ತಾರೆ. ಆದರೆ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳ ಜತೆ ಇರುವಾಗ ಚಾಲಕರು ತಮ್ಮ ರೂಟ್ ಬದಲಾವಣೆ ಮಾಡಿಕೊಂಡು ಅವರನ್ನು ಸಾಗಿಸಲು ಸಹಕರಿಸಬೇಕು ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News