ಕೇರಳ ಮೂಲದ ಆರೋಪಿಯಿಂದ 14 ಜಿಲ್ಲೆಗಳಿಗೆ ಡ್ರಗ್ಸ್ ಪೂರೈಕೆ : ಕಮಿಷನರ್ ಶಶಿಕುಮಾರ್

Update: 2021-06-22 11:36 GMT

ಮಂಗಳೂರು, ಜೂ. 22: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ನೈಜೀರಿಯಾದ ಪ್ರಜೆಯೊಬ್ಬನ ಸಹಿತ ಬಂಧಿತನಾಗಿರುವ ಕೇರಳ ಮೂಲದ ಆರೋಪಿ ಕೇರಳದ 14 ಜಿಲ್ಲೆಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬ ಅಂಶ ತನಿಖೆಯಿಂದ ಬಹಿರಂಗವಾಗಿದೆ.

ಬಂಧಿತ ನೈಜೀರಿಯಾದ ವ್ಯಕ್ತಿ ಕುರಿತಂತೆ ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಎನ್‌ಡಿಪಿಎಸ್‌ನಡಿ ಅಲ್ಲದೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಯನ್ನು ಬಂಧಿಸುವ ವೇಳೆ ಆತ ಸಿಬ್ಬಂದಿ ಜತೆ ಕ್ರೂರವಾಗಿ ವರ್ತಿಸಿದ್ದ. ಇಬ್ಬರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗುತ್ತಿದೆ. ಬಳಿಕ ಪೊಲೀಸ್ ಕಸ್ಟಡಿಗೆ ಪಡೆದು ಮತ್ತಷ್ಟು ತನಿಖೆಗೊಳಪಡಿಸಲಾಗುವುದು. ಇಬ್ಬರಿಂದ ಈಗಾಗಲೇ ಸಾಕಷ್ಟು ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

ನಿನ್ನೆ ಬಂಧಿಸಲ್ಪಟ್ಟ ಕೇರಳ ಮೂಲದ ಆರೋಪಿ ಬೆಂಗಳೂರಿನಲ್ಲಿ ಈ ನೈಜೀರಿಯಾ ಮೂಲದ ವ್ಯಕ್ತಿಯಿಂದ ವಾರವೊಂದಕ್ಕೆ ಇಂತಿಷ್ಟು ಪ್ರಮಾಣದಲ್ಲಿ ಡ್ರಗ್ಸ್ ಖರೀದಿಸಿ ಅದನ್ನು ಕೇರಳದ ಜಿಲ್ಲೆಗಳಲ್ಲಿ ತನ್ನ ಗ್ರಾಹಕರಿಗೆ ಪೂರೈಕೆ ಮಾಡುತ್ತಿದ್ದ. ಮಾತ್ರವಲ್ಲದೆ ಈತ ಮಂಗಳೂರನ್ನು ಗುರಿಯಾಗಿಸಿಕೊಂಡು ಬಹಳಷ್ಟು ಗ್ರಾಹಕರನ್ನು ಸಂಪರ್ಕಿಸಲು ಪ್ರಯತ್ನಿಸಿರುವುದು ಸದ್ಯದ ತನಿಖೆಯಿಂದ ತಿಳಿದು ಬಂದಿದೆ. ಮಂಗಳೂರು ಡಿಸಿಪಿ ಹರಿರಾಂ ಶಂಕರ್, ಎಸಿಪಿ ರಂಜಿತ್ ಕುಮಾರ್ ಬಂಡಾರು ಅವರ ನೇತೃತ್ವದ ತಂಡ ಈ ಮೂಲಕ ಡ್ರಗ್ಸ್ ಪೂರೈಕೆ- ಸಾಗಾಟಕ್ಕೆ ಸಂಬಂಧಿಸಿ ಬಹುದೊಡ್ಡ ಪ್ರಕರಣವನ್ನು ಬೇಧಿಸಿದ್ದು, ಕಳೆದ ಹಲವು ಸಮಯದಿಂದ ಈ ತಂಡ ಡ್ರಗ್ಸ್ ವಿರುದ್ಧ ದೊಡ್ಡ ಮಟ್ಟದ ಅಭಿಯಾನ ನಡೆಸಿದೆ. ಮಂಗಳೂರು ಡ್ರಗ್ಸ್ ಮುಕ್ತ ಮಾಡುವಲ್ಲಿ ಈ ತಂಡ ಸಕ್ರಿಯವಾಗಿದೆ ಎಂದು ಎನ್. ಶಶಿಕುಮಾರ್ ತಿಳಿಸಿದರು.

ನೈಜೀರಿಯಾ ಮೂಲದ ಬಂಧಿತ ಆರೋಪಿ 2018ರಲ್ಲಿ ಕೆಆರ್ ಪುರಂನಲ್ಲಿ ಪಾಸ್‌ಪೋರ್ಟ್ ಅವಧಿ ಮುಗಿದ ಬಳಿಕ ಅಕ್ರಮವಾಗಿ ನೆಲೆಸಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ. ಉನ್ನತ ವ್ಯಾಸಂಗಕ್ಕಾಗಿ ಬಂದು ಕೊನೆಗೆ ಇಂತಹ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News