ಕಾಪು ಶಾಸಕರ ಕಚೇರಿ ಎದುರು ಜನಾಗ್ರಹ ಪ್ರತಿಭಟನೆ

Update: 2021-06-22 12:11 GMT

ಕಾಪು: ಲಾಕ್ ಡೌನ್‍ನಿಂದ ಸಂತ್ರಸ್ತರಾದ ಕಾರ್ಮಿಕ, ಶ್ರಮಿಕ ವರ್ಗದವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಪಡೆಯಲು ವಿಧಿಸಲಾಗಿರುವ ಕಠಿಣ ಷರತ್ತುಗಳು ಮತ್ತು ನಿಯಮಗಳಿಂದಾಗಿ ಅರ್ಹರ ಕೈ ಸೇರದೆ ಘೋಷಿತ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದರು. 

ಮಂಗಳವಾರ ಕಾಪು ಶಾಸಕರ ಕಚೇರಿಯ ಮುಂಭಾಗದಲ್ಲಿ ಸಹಬಾಳ್ವೆ ಸಂಘಟನೆ ವತಿಯಿಂದ ಸಮಾನ ಮನಸ್ಕ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಯೋಗದಲ್ಲಿ ನಡೆದ ಜನಾಗ್ರಹ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಕೊರೋನ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ  ವಿಫಲತೆ ಕಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಸಿಕೆ ಒದಗಿಸುವುದರಲ್ಲಿಯೂ ಸಂಪೂರ್ಣ ವಿಫಲವಾಗಿದೆ ಎಂದು ದೂರಿದ ಅವರು, ಎಲ್ಲಾ ವಯೋ ವರ್ಗದವರಿಗೂ ಲಸಿಕೆ ನೀಡುವುದಾಗಿ ಭರವಸೆ ನೀಡಿರುವ ಸರ್ಕಾರ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಬೇಕಾದ ಮೊದಲ ಡೋಸನ್ನೇ ಇನ್ನೂ ಕೂಡ ನೀಡುವಲ್ಲಿ ಅಸಮರ್ಥವಾಗಿದೆ. ಕೋವಿಡ್ ಲಸಿಕಾ ಕೇಂದ್ರದಲ್ಲಿ ರಾಜಕೀಯ ಮೇಳೈಸುತ್ತಿದ್ದು, ತಾರತಮ್ಯತೆ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.  

ಖಾಲಿ ಚೀಲ ಸುಟ್ಟು ಪ್ರತಿಭಟನೆ: ಪ್ರತಿಭಟನೆಯಲ್ಲಿ ಕಾಂಗ್ರೆಸ್, ಜೆಡಿಎಸ್, ದಲಿತ ಸಂಘರ್ಷ ಸಮಿತಿ, ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ, ಮುಸ್ಲಿಮ್ ಒಕ್ಕೂಟ, ಜಮಾಅತೆ ಇಸ್ಲಾಮೀ ಹಿಂದ್ ಅಲ್ಲದೆ ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದವು. ಪ್ರತಿಭಟನೆಯ ಆರಂಭದಲ್ಲಿ ಕಾಪುವಿನ ರಾಜೀವ್ ಭವನದಿಂದ  ಪ್ರತಿಭಟನಾ ಮೆರೆವಣಿಗೆಯಲ್ಲಿ ಬಂದು ಶಾಸಕರ ಕಚೇರಿ ಎದುರು ಜಮಾವಣೆಗೊಂಡರು. ಈ ಸಂದರ್ಭದಲ್ಲಿ ಕೇಂದ್ರ, ರಾಜ್ಯ, ಸರ್ಕಾರ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಲಾಲಾಜಿ ಮೆಂಡನ್ ವಿರುದ್ಧ ಘೋಷಣೆ ಕೂಗಿದರು. ಖಾಲಿ ಚೀಲವನ್ನು ಸುಟ್ಟು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಉಪ ತಹಶೀಲ್ದಾರ್ ಕೆ. ರವಿ ಶಂಕರ್, ಅಶೋಕ್ ಬಳೆಗಾರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕೆಪಿಸಿಸಿ ಸಂಯೋಜಕ ನವೀನ್‍ಚಂದ್ರ ಜೆ. ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅನ್ವರ್ ಅಲಿ, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೈನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ ಮೊದಲಾದವರು ಮಾತನಾಡಿದರು. 

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ, ಪ್ರಮುಖರಾದ ಜಿತೇಂದ್ರ ಪುಟಾರ್ಡೊ,  ವಿನಯ ಬಲ್ಲಾಲ್, ಶರ್ಫುದ್ದೀನ್ ಕಾಪು, ಹರೀಶ್ ಶೆಟ್ಟಿ ಪಾಂಗಾಳ, ನವೀನ್ ಎನ್ ಶೆಟ್ಟಿ, ದೀಪಕ್ ಕುಮಾರ್ ಎರ್ಮಾಳ್, ಗಣೇಶ್ ಕೋಟ್ಯಾನ್, ಜೆಡಿಎಸ್ ಮುಖಂಡರಾದ ಇಸ್ಮಾಯಿಲ್ ಪಲಿಮಾರ್, ದಲಿತ ಸಂಘರ್ಷ ಸಮಿತಿಯ ಕಾಪು ತಾಲ್ಲೂಕು ಪ್ರಧಾನ ಸಂಚಾಲಕ ವಿಠಲ್ ಉಚ್ಚಿಲ, ಸೌಮ್ಯ, ಕೀರ್ತಿ ಕುಮಾರ್, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಕೇಶವ ಸಾಲ್ಯಾನ್ ಹೆಜಮಾಡಿ, ಝಹೀರ್ ಅಹಮದ್ ಬೆಳಪು, ನಾಗೇಶ್ ಕುಮಾರ್ ಉದ್ಯಾವರ, ಇಸ್ಮಾಯಿಲ್ ಕನ್ನಂಗಾರ್, ಮುಸ್ಲಿಮ್ ಒಕ್ಕೂಟ ಕಾಪು ತಾಲ್ಲೂಕು ಅಧ್ಯಕ್ಷ ಶಭೀ ಅಹಮದ್ ಖಾಜಿ, ಕಾರ್ಯದರ್ಶಿ ರಿಯಾಝ್ ಮುದರಂಗಡಿ, ಜಮಾಅತೆ ಇಸ್ಲಾಮೀ ಹಿಂದ್‍ನ ಕಾಪು ವರ್ತುಲದ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News