ಮಠದಬೆಟ್ಟು ಕಾಲುಸಂಕ ಕುಸಿದ ಸ್ಥಳಕ್ಕೆ ಶಾಸಕರ ಭೇಟಿ
Update: 2021-06-23 19:06 IST
ಉಡುಪಿ, ಜೂ.23: ನಗರಸಭಾ ವ್ಯಾಪ್ತಿಯ ಬನ್ನಂಜೆ ಮಠದಬೆಟ್ಟು ಕಡಿಯಾಳಿ ಸಂಪರ್ಕಿಸುವ ಕಾಲುಸಂಕ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದು ಬಿದ್ದ ಸ್ಥಳಕ್ಕೆ ಶಾಸಕ ಕೆ.ರಘುಪತಿ ಭಟ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜನರ ಓಡಾಟಕ್ಕೆ ಅತ್ಯವಶ್ಯಕವಾದ ಕಾಲುಸಂಕ ಇದಾಗಿರುವುದರಿಂದ ತಕ್ಷಣವೇ ಇದಕ್ಕೆ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್, ಗೀತಾ ಶೇಟ್, ಮಾಜಿ ನಗರಸಭಾ ಸದಸ್ಯ ಹರೀಶ್ರಾಮ್ ಮತ್ತು ನಗರಸಭೆಯ ಅಭಿಯಂತರ ದುರ್ಗಾಪ್ರಸಾದ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.