ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವೆಲ್ಪೇರ್ ಪಾರ್ಟಿ ಪ್ರತಿಭಟನೆ
ಉಡುಪಿ, ಜೂ.23: ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸಲಾಯಿತು.
ಉಡುಪಿ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೆಲ್ಪೇರ್ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಉದ್ಯಾವರ, ಜನರು ಕೊರೊನಾ ಸಂಕಷ್ಟದಲ್ಲಿ ಸಿಲುಕಿ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಪರಿಸ್ಥಿತಿ ಭೀಕರ ಸ್ವರೂಪ ಪಡೆದಿದೆ. ಇಂತಹ ಕಠಿಣ ಪರಿಸ್ಥಿತಿ ಯಲ್ಲಿ ರಾಜ್ಯ ಸರಕಾರ ಏಕಾಏಕಿ ವಿದ್ಯುತ್ ದರ ಏರಿಸಿದೆ. ಕಷ್ಟದಲ್ಲಿ ಇರುವವ ರಿಗೆ ಮತ್ತಷ್ಟು ಕಷ್ಟ ಕೊಡುತ್ತಿದೆ. ಅವೈಜ್ಞಾನಿಕವಾಗಿ ವಿದ್ಯುತ್, ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ಕೂಡಲೇ ಬೆಲೆ ಏರಿಕೆ ನೀತಿಯನ್ನು ಹಿಂಪಡೆದು ಜನರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೆಲ್ಪೇರ್ ಪಾರ್ಟಿ ಕಾರ್ಯಕರ್ತರಾದ ರಿಯಾಜ್ ಅಹಮದ್, ನಿಸಾರ್ ಅಹಮದ್, ಶಾರೂಕ್, ಪರ್ವೇಜ್, ಸಯೀದ್ ಇಸ್ಮಾಯಿಲ್, ಫರ್ಹಾನ್, ರೌಹಾನ್ ಉಪಸ್ಥಿತರಿದ್ದರು.
ಕಾಪುವಿನಲ್ಲಿ ಪ್ರತಿಭಟನೆ: ಕಾಪು ಪೇಟೆಯಲ್ಲಿ ಪಕ್ಷದ ಕಾರ್ಯಕರ್ತರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೆಲ್ಫೇರ್ ಪಾರ್ಟಿ ಮಾಜಿ ರಾಜ್ಯ ಕಾರ್ಯದರ್ಶಿ ಅನ್ವರ್ ಅಲಿ, 2014ರಲ್ಲಿ ಅಚ್ಚೇ ದಿನ್ಗಳ ಕನಸನ್ನು ಬಿತ್ತಿ ಅಧಿಕಾರಕ್ಕೆ ಬಂದ ಸರಕಾರ ಇಂದು ಜನರನ್ನು ದೋಚುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಉದ್ಯಾವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರುಕ್ ತೀರ್ಥಹಳ್ಳಿ, ರಾಜ್ಯ ಮಾಜಿ ಕಾರ್ಯ ದರ್ಶಿ ರಿಯಾಜ್ ಕುಕ್ಕಿಕಟ್ಟೆ, ಅಬ್ದುರ್ರಹಮಾನ್ ಉದ್ಯಾವರ, ಮುಹಮ್ಮದ್ ಇಕ್ಬಾಲ್ ಮಜೂರ್, ಮುಹಮ್ಮದ್ ಅಲಿ ಕಾಪು, ಫಾರಿಸ್, ಆರೀಫ್, ಸಾಹಿಲ್, ಅಬ್ದುಲ್ ಸತ್ತಾರ್, ಅಬ್ದುಲ್ ಅಹದ್, ಮುಹಮ್ಮದ್ ಅವೇಝ್ ಉಪಸ್ಥಿತರಿದ್ದರು.
ಹೂಡೆಯಲ್ಲಿ ಪ್ರತಿಭಟನೆ: ಪೆಟ್ರೋಲ್, ಡಿಸೇಲ್, ಅಡುಗೆ ಸಿಲಿಂಡರ್, ವಿದ್ಯುತ್ ಬಿಲ್ ಹಾಗೂ ಆಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಹೂಡೆ ವತಿಯಿಂದ ಹೂಡೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಸ್ಲಮ್ ಹೈಕಾಡಿ, ಅಬ್ದುಲ್ ಕಾದೀರ್ ಮೊಯ್ದಿನ್ ಮಾತನಾಡಿದರು. ಈ ಸಂದರ್ಭದಲ್ಲಿ ಡಬ್ಲ್ಯೂಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷ ವಿಜಯ್, ಗ್ರಾಪಂ ಸದಸ್ಯೆ ಮಮ್ತಾಝ್, ರವೂಫ್ ಕಿದೆವರ್, ಅಬ್ದುಲ್ ರಝಾಕ್ ನಕ್ವಾ, ಅಲ್ತಾಫ್ ನಕ್ವಾ, ಝೈನುಲ್ಲಾ ಹೂಡೆ, ಶುಐಬ್, ನಿಫಾಲ್ ಹೂಡೆ, ಫೈಸಲ್ ನಕ್ವಾ ಹೂಡೆ, ಅನ್ವರ್ ಸಾಹೇಬ್ ಹೂಡೆ, ಉಮರ್ ಉಸ್ತಾದ್ ಉಪಸ್ಥಿತರಿದ್ದರು.