ಶುಕ್ರವಾರ ಸಂಜೆ 7 ರಿಂದ ವಾರಾಂತ್ಯದ ಕರ್ಫ್ಯೂ : ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಜೂ. 24: ಜಿಲ್ಲೆಯಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಮೊದಲ ಬಾರಿ ವಾರಾಂತ್ಯದ ಕಫ್ಯೂ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಗೊಳ್ಳಲಿದ್ದು, ಈ ವೇಳೆ ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಕೇಂದ್ರ ಹಾಗೂ ಪ್ರಾಣಿಗಳ ಮೇವನ್ನು ವ್ಯಾಪಾರ ಮಾಡುವ ಅಂಗಡಿಗಳಿಗೆ ಬೆಳಗ್ಗೆ 6 ರಿಂದ ಅಪರಾಹ್ನ 2 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಬೀದಿ ಬದಿ ವ್ಯಾಪಾರಿ ಗಳು ಸಹ ಬೆಳಗ್ಗೆ 6 ರಿಂದ ಅಪರಾಹ್ನ 2 ರವರೆಗೆ ಕಾರ್ಯನಿರ್ವಹಿಸಬಹುದು. ಆದರೆ ಯಾವುದೇ ತಯಾರಿಸಿದ ಆಹಾರ, ಪಾನಿಪುರಿ, ಚಾಟ್ಸ್ ಮಾರಲು ಅವಕಾಶವಿಲ್ಲ.
ಸಾರ್ವಜನಿಕ ವಿತರಣಾ ವ್ಯವಸ್ಥೆ ಸಹ ಇದೇ ಅವಧಿಗೆ ಕಾರ್ಯನಿರ್ವಹಿಸಲು ಅವಕಾಶವಿದೆ. ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳು ಈ ಅವಧಿಯಲ್ಲಿ ಪಾರ್ಸೆಲ್ಗಳನ್ನು ಮಾತ್ರ ನೀಡಬೇಕು. ಹೋಮ್ ಡೆಲಿವರಿ ಸೇವೆಗಳು ದಿನ 24 ಗಂಟೆ ಕಾರ್ಯನಿರ್ವಹಿಸಬಹುದು. ರೆಸ್ಟೋರೆಂಟ್ಗಳು, ತಿನಿಸು ಕೇಂದ್ರಗಳಲ್ಲಿ ಆಹಾರವನ್ನು ಪಾರ್ಸೆಲ್ ಕೊಂಡೊಯ್ಯಬಹುದು.
ಬಸ್ ಸೇವೆಗಳು, ರೈಲುಗಳು ಮತ್ತು ವಿಮಾ ಪ್ರಯಾಣಿಕರಿಗೆ ನಿಲ್ದಾಮಗಳಿಗೆ ತೆರಳಲು ಅನುಮತಿ ಇದೆ. ಬಸ್ ನಿಲ್ದಾಣಗಳಿಂದ ಹೊರಡುವ ಸಾರ್ವಜನಿಕ ಸಾರಿಗೆ ವಾಹನ, ಖಾಸಗಿ ವಾಹನಗಳ, ಟ್ಯಾಕ್ಸಿಗಳ ಓಡಾಟಕ್ಕೆ ಅನುಮತಿ ಇದೆ. ಈಗಾಗಲೇ ನಿಗದಿಯಾಗಿರುವ ಮದುವೆಗೆ 40 ಮಂದಿಯ ಭಾಗವಹಿಸುವಿಕೆ ಯೊಂದಿಗೆ ಸರಳವಾಗಿ ಮನೆಯಲ್ಲಿ ನಡೆಸಲು ಅನುಮತಿ ಇದೆ. ಅದೇ ರೀತಿ ಶವಸಂಸ್ಕಾರವನ್ನೂ ಐದು ಮಂದಿಯ ಪಾಲ್ಗೊಳ್ಳುವಿಕೆಯೊಂದಿಗೆ ನಡೆಸಬಹುದು.
ಎಲ್ಲಾ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಚೇರಿಗಳು, ಅವುಗಳ ಸ್ವಾಯತ್ತ ಸಂಸ್ಥೆಗಳು ಹಾಗೂ ಅದರಲ್ಲಿ ದುಡಿಯುವ ಅಧಿಕಾರಿಗಳು ಸಿಬ್ಬಂದಿಗಳ ಸಂಚಾರಕ್ಕೆ ಅನುಮತಿ ಇದೆ. ತುರ್ತು ಮತ್ತು ಅಗತ್ಯ ಸೇವೆಗಳ ಕೈಗಾರಿಕೆಗಳು, ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ಇದೆ. ರೋಗಿಗಳು, ಅವರ ಪರಿಚಾರಕರು, ಲಸಿಕೆ ತೆಗೆದುಕೊಳ್ಳುವವರು ಅಗತ್ಯ ದಾಖಲೆಗಳೊಂದಿಗೆ ಸಂಚರಿಸಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.