×
Ad

ಹರ್ಯಾಣದ ನುಹ್ ಜಿಲ್ಲೆಯಲ್ಲಿ ಬಲವಂತದ ಮತಾಂತರ ಕುರಿತು ಸಿಟ್ ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

Update: 2021-06-28 20:47 IST

ಹೊಸದಿಲ್ಲಿ,ಜೂ.28: ಹರ್ಯಾಣದ ನುಹ್ ಜಿಲ್ಲೆಯಲ್ಲಿ ಹಿಂದುಗಳ ಬಲವಂತದ ಮತಾಂತರ ಆರೋಪಗಳ ಕುರಿತು ತನಿಖೆಗೆ ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿತು.

ಕ್ಷಮಿಸಿ, ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಅರ್ಜಿದಾರರ ಪರ ವಕೀಲ ವಿಕಾಸ ಸಿಂಗ್ ಅವರಿಗೆ ತಿಳಿಸಿತು.
 
ಅರ್ಜಿದಾರರ ಪೈಕಿ ಇಬ್ಬರು ನುಹ್ ಜಿಲ್ಲೆಗೆ ಭೇಟಿ ನೀಡಿದ್ದರು ಮತ್ತು ಕಳೆದ ವರ್ಷದ ಅಕ್ಟೋಬರ್ನಲ್ಲಿ ವಲ್ಲಭಗಡದ ತನ್ನ ಕಾಲೇಜಿನ ಹೊರಗೆ ಗುಂಡಿಗೆ ಬಲಿಯಾಗಿದ್ದ ನಿಕಿತಾ ತೋಮರ್(21) ಕುಟುಂಬ ಸೇರಿದಂತೆ ಜನರನ್ನು ಮುಖತಃ ಮಾತನಾಡಿಸಿದ್ದರು ಎಂದು ಸಿಂಗ್ ಪೀಠಕ್ಕೆ ತಿಳಿಸಿದರು. ವೃತ್ತಪತ್ರಿಕೆಗಳ ವರದಿಗಳ ಆಧಾರದಲ್ಲಿ ಈ ಅರ್ಜಿಯನ್ನು ಅಂಗೀಕರಿಸಬಹುದು ಎಂದು ನಾವು ಭಾವಿಸಿಲ್ಲ ಎಂದು ಪೀಠವು ಹೇಳಿತು.
  
ನಿಕಿತಾ ಹತ್ಯೆ ಆರೋಪಿಗಳ ಪೈಕಿ ತೌಸಿಫ್ ಎಂಬಾತ ತನ್ನನ್ನು ಮದುವೆಯಾಗುವಂತೆ ಆಕೆಯನ್ನು ಬಲವಂತಗೊಳಿಸುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದು,ಈ ವರ್ಷದ ಮಾರ್ಚ್ ನಲ್ಲಿ ಫರೀದಾಬಾದಿನ ತ್ವರಿತ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
   
ನುಹ್ನಲ್ಲಿ ಪ್ರಾಬಲ್ಯ ಹೊಂದಿರುವ ಅಲ್ಪಸಂಖ್ಯಾತ ಸಮುದಾಯದ ಜನರಿಂದ ಹಿಂದುಗಳ ಜೀವ, ವೈಯಕ್ತಿಕ ಸ್ವಾತಂತ್ರ ಮತ್ತು ಧಾರ್ಮಿಕ ಹಕ್ಕುಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ವಕೀಲರ ಗುಂಪು ಮತ್ತು ಓರ್ವ ಸಾಮಾಜಿಕ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿಯು ಆರೋಪಿಸಿತ್ತು. ರಾಜ್ಯ ಸರಕಾರ, ಜಿಲ್ಲಾಡಳಿತ ಮತ್ತು ಪೊಲೀಸರು ತಮ್ಮ ಅಧಿಕಾರಗಳನ್ನು ಚಲಾಯಿಸುವಲ್ಲಿ ವಿಫಲರಾಗಿರುವುದರಿಂದ ಹಿಂದುಗಳು,ವಿಶೇಷವಾಗಿ ಮಹಿಳೆಯರು ಹಾಗೂ ದಲಿತರ ಬದುಕು ಮತ್ತು ಸ್ವಾತಂತ್ರ ಸಂಕಷ್ಟದಲ್ಲಿವೆ ಮತ್ತು ಅವರು ಅಲ್ಲಿಯ ಪ್ರಬಲ ಗುಂಪಿನ ಖಡ್ಗದಲಗಿನಡಿ ಬದುಕುವಂತಾಗಿದೆ ಎಂದು ಪ್ರತಿಪಾದಿಸಿದ್ದ ಅರ್ಜಿಯು, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಸಿಬಿಐ ಮತ್ತು ಎನ್ಐಎ ಅಧಿಕಾರಿಗಳನ್ನೊಳಗೊಂಡ ಸಿಟ್ ರಚನೆಗೆ ನಿರ್ದೇಶ ನೀಡುವಂತೆ ಕೋರಿತ್ತು.

ಹಿಂದುಗಳ ಬಲವಂತದ ಮತಾಂತರ, ಅವರ ಆಸ್ತಿಗಳ ಕಾನೂನು ಬಾಹಿರ ಮಾರಾಟ, ಹಿಂದು ಮಹಿಳೆಯರು ಮತ್ತು ಬಾಲಕಿಯರ ವಿರುದ್ಧದ ದೌರ್ಜನ್ಯಗಳು,ಸರಕಾರಿ ಭೂಮಿಯ ಅತಿಕ್ರಮಣ,ಪ್ರದೇಶದಲ್ಲಿಯ ದೇವಸ್ಥಾನಗಳು, ಧಾರ್ಮಿಕ ಸ್ಥಳಗಳು ಮತ್ತು ರುದ್ರಭೂಮಿಗಳ ಸ್ಥಿತಿಗತಿಗಳ ಬಗ್ಗೆಯೂ ಸಿಟ್ ತನಿಖೆ ನಡೆಯಬೇಕು ಎಂದು ಅರ್ಜಿಯು ಆಗ್ರಹಿಸಿತ್ತು.
 
2011ರ ಜನಗಣತಿಯಂತೆ ನುಹ್ (ಹಿಂದಿನ ಮೇವಾತ್ ಜಿಲ್ಲೆ)ನ ಒಟ್ಟು ಜನಸಂಖ್ಯೆ 10,89,263 ಆಗಿದ್ದು,ಈ ಪೈಕಿ ಅಂದಾಜು ಶೇ.79.20ರಷ್ಟು ಮುಸ್ಲಿಮರಾಗಿದ್ದರೆ, ಶೇ.20.37ರಷ್ಟು ಹಿಂದುಗಳಾಗಿದ್ದಾರೆ. ಉಳಿದ ಶೇ.0.43 ಜನಸಂಖ್ಯೆಯಲ್ಲಿ ಸಿಕ್ಖರು, ಬೌದ್ಧರು, ಜೈನರು ಮತ್ತಿತರರು ಸೇರಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News