ಮಂಗಳೂರು : ಬೀದಿನಾಯಿಗೆ ಗುಂಡು ಹಾರಿಸಿ ಹತ್ಯೆ!
ಮಂಗಳೂರು, ಜು.2: ನಗರದ ಶಿವಭಾಗ್ ಸಮೀಪದ ಜ್ಯುವೆಲ್ಲರ್ಸ್ ಮಳಿಗೆಯೊಂದರ ಹಿಂಭಾಗದಲ್ಲಿ ಗುರುವಾರ ತಡರಾತ್ರಿ ದುಷ್ಕರ್ಮಿಯೋರ್ವ ಬೀದಿನಾಯಿಗೆ ಗುಂಡು ಹೊಡೆದು ಕೊಂದು ಹಾಕಿರುವುದಾಗಿ ವರದಿಯಾಗಿದೆ.
ಘಟನೆಯು ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿದೆ. ಈ ಘಟನೆ ಪ್ರಾಣಿಪ್ರಿಯರನ್ನು ಬೆಚ್ಚಿ ಬೀಳಿಸಿದೆ. ಈ ಬಗ್ಗೆ ಅನಿಮಲ್ ಕೇರ್ ಟ್ರಸ್ಟ್ನ ಮುಖ್ಯಸ್ಥೆ ಸುಮಾ ಅವರು ಕದ್ರಿ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಘಟನೆಯ ನಂತರ ಸ್ಥಳಕ್ಕೆ ತೆರಳಿದ್ದ ಅನಿಮಲ್ ಕೇರ್ ಟ್ರಸ್ಟ್ ಕಾರ್ಯಕರ್ತರು ನಾಯಿಯನ್ನು ಆ್ಯಂಬುಲೆನ್ಸ್ ಮೂಲಕ ನಗರದ ಜೈಲು ರಸ್ತೆಯ ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಾಯಿಯ ದೇಹದಲ್ಲಿ ಬುಲೆಟ್ ಲಭಿಸಿದೆ ಎಂದು ಹೇಳಿದ್ದಾರೆ.
ಸಮಗ್ರ ತನಿಖೆ ಆಗ್ರಹ: ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಮಾ ರಮೇಶ್, ಇದೊಂದು ಅಮಾನವೀಯ ಕೃತ್ಯ. ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಗುಂಡು ಹಾರಿಸಿದ ವ್ಯಕ್ತಿಯನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.