ನಟ ರಕ್ಷಿತ ಶೆಟ್ಟಿ ಬಗ್ಗೆ ಅವಹೇಳನಕಾರಿ ಕಾರ್ಯಕ್ರಮ ಆರೋಪ: ಕುಂದಾಪುರ ಯುವ ಬಂಟರ ಸಂಘ ಖಂಡನೆ
ಕುಂದಾಪುರ, ಜು.2: ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ರಕ್ಷಿತ್ ಶೆಟ್ಟಿ ಅವರ ಕುರಿತಂತೆ ಕನ್ನಡ ವಾಹಿನಿಯೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ನಟನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘ ತೀವ್ರವಾಗಿ ಖಂಡಿಸಿದೆ.
ವಾಹಿನಿಯಲ್ಲಿ ಪ್ರಸಾರವಾದ ‘ಸಿನಿ ಅಡ್ಡ’ ಎಂಬ ಬೇಜವಾಬ್ದಾರಿ ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿಯನ್ನು ನಿಂದಿಸಲಾಗಿದೆ. ಇದರಿಂದ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಿಗೆ ತೀವ್ರವಾದ ಬೇಸರ ಉಂಟಾಗಿದೆ ಎಂದು ಸಂಘ ಹೇಳಿದೆ.
ಶುಕ್ರವಾರ ಕುಂದಾಪುರದಲ್ಲಿ ಯುವ ಬಂಟರ ಸಂಘದ ವತಿಯಿಂದ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು ನೇತತ್ವದಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ಧ ಕುಂದಾಪುರ ಪೋಲಿಸ್ ಉಪಾಧೀಕ್ಷಕರ ಕಚೇರಿಯಲ್ಲಿ ದೂರನ್ನು ದಾಖಲಿಸಲಾಯಿತು.
‘ಈ ಸಿನಿ ಅಡ್ಡ ಎನ್ನುವ ಬೇಜವಾಬ್ದಾರಿತನದ ಕಾರ್ಯಕ್ರಮವನ್ನು ಆಯೋಜಿ ಸಿದವರು ಯಾರೇ ಆಗಲಿ ಅವರು ಕೂಡಲೇ ಕ್ಷಮೆ ಯಾಚಿಸಬೇಕು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ನೇತೃತ್ವದ ನಿಯೋಗ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರಿಗೆ ಮನವಿಯನ್ನು ಅರ್ಪಿಸಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಸಂತೋಷ್ ಶೆಟ್ಟಿ, ಸದಸ್ಯರಾದ ಭರತ್ ಶೆಟ್ಟಿ, ಸಚಿನ್ ಶೆಟ್ಟಿ ವಕ್ವಾಡಿ, ರೋಶನ್ ಶೆಟ್ಟಿ, ಮಹೇಂದ್ರ ಶೆಟ್ಟಿ ಉಪಸ್ಥಿತರಿದ್ದರು.