ಬ್ರಹ್ಮಾವರ: ಉಪ್ಪಿನಕೋಟೆ ಪ್ಲ್ಯಾಟ್ ನಲ್ಲಿ ಮಹಿಳೆಯ ಕೊಲೆ
Update: 2021-07-12 22:34 IST
ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಎಂಬಲ್ಲಿರುವ ಫ್ಲ್ಯಾಟ್ ನಲ್ಲಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದವರನ್ನು ವಿಶಾಲ ಗಾಣಿಗ(35) ಎಂದು ಗುರುತಿಸಲಾಗಿದೆ. ಇವರು ಜು.11ರಂದು ರಾತ್ರಿಯಿಂದ ಮನೆಯಲ್ಲಿ ಒಬ್ಬರೆ ಇದ್ದರೆನ್ನಲಾಗಿದೆ. ಈ ಅವಧಿಯಲ್ಲಿ ದುಷ್ಕಮಿಗಳು ಫ್ಲ್ಯಾಟ್ ಗೆ ಆಗಮಿಸಿ ಮಹಿಳೆಯನ್ನು ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ. ಇಂದು ಸಂಜೆ ವೇಳೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ವಿಶಾಲ ಗಾಣಿಗ ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ದುಷ್ಕಮಿಗಳು ಕೊಲೆಗೈದ ಬಳಿಕ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.