ಯುಎಪಿಎ ಕಾಯ್ದೆ ಮೂಲಕ ಪ್ರಭುತ್ವದಿಂದ ಸ್ಟ್ಯಾನ್ ಸ್ವಾಮಿ ಹತ್ಯೆ: ಪ್ರೊ.ಫಣಿರಾಜ್ ಆರೋಪ

Update: 2021-07-12 17:12 GMT

ಉಡುಪಿ, ಜು.12: ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಯಾರನ್ನು ಬೇಕಾದರೂ ಯಾವ ಸಾಕ್ಷ ಇಲ್ಲದೆ ಯುಎಪಿಎ ಕಾಯ್ದೆಯಡಿ ಬಂಧಿಸಬಹುದಾಗಿದೆ. ಇದರಲ್ಲಿ ಜಾಮೀನು ಬೇಕಾದರೆ ಆರೋಪಿಗಳು ತಾನು ಆರೋಪಿ ಅಲ್ಲ ಎಂಬುದಾಗಿ ಸಾಬೀತುಪಡಿಸಬೇಕಾಗುತ್ತದೆ. ಜಗತ್ತಿನ ಯಾವುದೇ ಕಾನೂನಿನಲ್ಲಿ ಇಲ್ಲದ ಈ ಹೊಸ ಸಂಪ್ರದಾಯವನ್ನು ಎನ್‌ಐಎ ಭಾರತದಲ್ಲಿ ಶುರು ಮಾಡಿದೆ. ಆ ಕಾರಣಕ್ಕೆ ಫಾದರ್ ಸ್ಟ್ಯಾನ್ ಸ್ವಾಮಿ ಪ್ರಭುತ್ವದಿಂದ ಹಾಗೂ ಎನ್‌ಐಎಯಿಂದ ಹತ್ಯೆಯಾಗಿದ್ದಾರೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಟೀಕಿಸಿದ್ದಾರೆ.

ಉಡುಪಿ ಸಹಬಾಳ್ವೆ ವತಿಯಿಂದ ಸೋಮವಾರ ಉಡುಪಿಯ ಅಜ್ಜರಕಾಡಿನ ಹುತಾತ್ಮ ಚೌಕದ ಬಳಿ ಹಮ್ಮಿಕೊಳ್ಳಲಾದ ಫಾದರ್ ಸ್ಟ್ಯಾನ್ ಸ್ವಾಮಿ ಅವರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪಾರ್ಕಿನ್ಸನ್ ಕಾಯಿಯಿಂದ ಬಳಲುತ್ತಿದ್ದ ಸ್ವಾಮಿಗೆ ನೀರು ಕುಡಿಯಲು ಸ್ಟ್ರಾ ಮತ್ತು ಸಿಪ್ಪರ್ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಿಲ್ಲ. ಈ ಕನಿಷ್ಠ ಸಂವಿಧಾನಿಕ ಜವಾಬ್ದಾರಿಯನ್ನು ಎನ್‌ಐಎ ಮತ್ತು ಜೈಲಾಧಿಕಾರಿಗಳು ನಿಬಾಯಿ ಸಿಲ್ಲ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಮೊದಲ ಕೊಲೆ ಯಾಗಿದೆ. ಸ್ವಾಮಿಯ ಈ ಸಾವಿನ ಜವಾಬ್ದಾರಿಯನ್ನು ಮುಂಬೈ ಹೈಕೋರ್ಟ್, ಎನ್‌ಐಎ, ಗೃಹ ಮಂತ್ರಾಲಯ ಯಾರು ಹೊರಬೇಕಾಗಿದೆ ಎಂದು ಅವರು ಪ್ರಶ್ನಿಸಿದರು.

ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಮಾತನಾಡಿ, ಇಂದು ಪ್ರಜಾಪ್ರಭುತ್ವ ಎಂಬುದು ಕೇವಲ ಪುಸ್ತಕಕ್ಕೆ ಸೀಮಿತವಾಗಿದೆ. ಎದುರಾಳಿಯನ್ನು ಟೀಕೆ ಮಾಡಿಯೇ ಚುನಾವಣೆಯಲ್ಲಿ ಗೆದ್ದು ಬಂದ ಮೋದಿಗೆ ಬೇರೆಯವರು ಮಾಡುವ ಟೀಕೆಯನ್ನು ಸಹಿಸಲು ಆಗುತ್ತಿಲ್ಲ. ಇಂದು ಸರಕಾರ ಅಂದರೆ ಮೋದಿ, ಭಾರತ ದೇಶ ಅಂದರೆ ಮೋದಿ ಎಂಬಂತೆ ಬಿಂಬಿಸಲಾಗುತ್ತಿದೆ. ಮೋದಿಯ ವಿರುದ್ಧ ಮಾತನಾಡುವವರು, ಬರೆಯುವವರಿಗೆ ದೇಶದ್ರೋಹಿ ಪಟ್ಟ ಕಟ್ಟುವ ಹುನ್ನಾರ ಈ ದೇಶದಲ್ಲಿ ನಡೆಯುತ್ತಿದೆ ಎಂದು ದೂರಿದರು.

ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಮೋದಿ ಸರಕಾರ ದೇಶದಲ್ಲಿ ಸಂವಿಧಾನ ಪ್ರಕಾರ ಆಡಳಿತ ನಡೆಸು ತ್ತಿಲ್ಲ ಮತ್ತು ನಿರಂತರವಾಗಿ ಕಾನೂನು ಉಲ್ಲಂಘನೆಗಳನ್ನು ಮಾಡುತ್ತಿದೆ. ಕೇಂದ್ರ ಸರಕಾರ ಯುಎಪಿಎಯಂತಹ ಕರಾಳ ಕಾಯಿದೆಯನ್ನು ತನ್ನ ಲಾಭಕ್ಕಾಗಿ ದುರು ಪಯೋಗ ಮಾಡಿಕೊಳ್ಳುತ್ತಿದೆ. ಈ ಮೂಲಕ ಪ್ರಗತಿಪರ ಚಿಂತರು, ಹೋರಾಟಗಾರರನ್ನು ಧಮನ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿದರು. ಈ ಸಂದರ್ಭ ದಲ್ಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕೋಟ, ಮಾಜಿ ಅಧ್ಯಕ್ಷ ಯಾಸೀನ್ ಮಲ್ಪೆ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಫಾ.ಚೇತನ್ ಲೋಬೊ, ಫಾ.ವಿಲಿಯಂ ಮಾರ್ಟಿಸ್, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಶಂಕರ್ ಚೇಂಡ್ಕಳ, ಶಿವಾನಂದ ಮೂಡಬೆಟ್ಟು, ವಿವಿಧ ಸಂಘಟನೆ ಗಳ ಮುಖಂಡರಾದ ಹುಸೇನ್ ಕೋಡಿಬೆಂಗ್ರೆ, ಗಣೇಶ್ ನೆರ್ಗಿ, ಪ್ರಶಾಂತ್ ಜತ್ತನ್ನ, ಇಕ್ಬಾಲ್ ಮನ್ನಾ, ವರೋನಿಕಾ ಕರ್ನೆಲಿಯೋ, ರೋಶನಿ ಒಲಿವೇರಾ, ಮೇರಿ ಡಿಸೋಜ, ವಾಲ್ಟರ್ ಸಿರಿಲ್ ಪಿಂಟೋ, ಪ್ರೊ.ಸಿರಿಲ್ ಮಥಾಯಸ್, ಯತೀಶ್ ಕರ್ಕೆರ, ಅಬ್ದುಲ್ ಅಝೀಝ್ ಉದ್ಯಾವರ, ಇದ್ರೀಸ್ ಹೂಡೆ ವೊದಲಾದ ವರು ಉಪಸ್ಥಿತರಿದ್ದರು.

ನ್ಯಾಯಿಕ ತನಿಖೆಗೆ ಒತ್ತಾಯ
ಫಾ.ಸ್ಟಾನ್ ಸ್ವಾಮಿಯವರ ಸಾವಿಗೆ ಕಾರಣವಾದ ಎಲ್ಲ ಸಂಗತಿಗಳ ಕುರಿತು ನ್ಯಾಯಿಕ ತನಿಖೆ ನಡೆಸಿ ತಪ್ಪಿಸಸ್ತರನ್ನು ವಿಚಾರಣೆಗೆ ಒಳಪಡಿಸಬೇಕು. ಭೀಮಾ ಕೋರೇಂಗಾವ್ ಪ್ರಕರಣದಲ್ಲಿ, ಯಾವುದೇ ನ್ಯಾಯಿಕ ಪುರಾವೆಗಳಿಲ್ಲದೆ ಸೆರೆ ಯಲ್ಲಿಟ್ಟಿರುವ 15 ಜನರನ್ನು ಬಿಡುಗಡೆಗೊಳಿಸಬೇಕು. ಇಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿರುವ ಯುಎಪಿಎ, ಎನ್‌ಎಸ್‌ಎ ಕಾಯ್ದೆ ಗಳನ್ನು ರದ್ದುಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News