ಅಫ್ಘಾನಿಸ್ತಾನದಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಫೋಟೊ ಪತ್ರಕರ್ತ ದಾನಿಶ್ ಸಿದ್ದೀಕಿ ಮೃತ್ಯು

Update: 2021-07-16 17:29 GMT
Photo: Economic times

ಕಾಬೂಲ್:‌ ಅಫ್ಘಾನಿಸ್ತಾನದ ಕಂದಹಾರ್‌ ನಗರದ ಬೊಲ್ಡಾಕ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಘರ್ಷಣೆಯಲ್ಲಿ ಭಾರತೀಯ ಫೋಟೊ ಪತ್ರಕರ್ತ ದಾನಿಶ್ ಸಿದ್ದೀಕಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರು ಅಫ್ಘಾನಿಸ್ತಾನದ ವಿಶೇಷ ಪಡೆಗಳೊಂದಿಗೆ ವರದಿ ನಡೆಸುತ್ತಿರುವ ಸಂದರ್ಭದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು indiatoday.in ವರದಿ ಮಾಡಿದೆ.

ದಾನಿಶ್ ಸಿದ್ದೀಕಿ ನಿಧನದ ಕುರಿತು ಭಾರತದ ಅಫ್ಘಾನ್‌ ರಾಯಭಾರಿ ಫರೀದ್‌ ಮಾಮುಂಡ್ಝೆ ಟ್ವೀಟ್‌ ಮಾಡಿದ್ದಾರೆ. "ನಿನ್ನೆ ರಾತ್ರಿ ಕಂದಹಾರ್‌ ನಲ್ಲಿ ಸ್ನೇಹಿತ ದಾನಿಶ್ ಸಿದ್ದೀಕಿಯವರ ಹತ್ಯೆಯಾಗಿದ್ದನ್ನು ತಿಳಿದು ತೀವ್ರ ದುಃಖವಾಗಿದೆ. ಭಾರತೀಯ ಪತ್ರಕರ್ತ ಹಾಗೂ ಪುಲಿಟ್ಜರ್‌ ಪ್ರಶಸ್ತಿ ವಿಜೇತ ಸಿದ್ದೀಕಿ ಅಫ್ಘಾನ್‌ ಪಡೆಗಳೊಂದಿಗಿದ್ದರು. ಅವರು ಕಾಬೂಲ್‌ ಗೆ ತೆರಳುವ ಎರಡು ವಾರಗಳ ಮುಂಚೆ ನಾನು ಭೇಟಿಯಾಗಿದ್ದೆ. ಅವರ ಕುಟುಂಬಕ್ಕೆ ಮತ್ತು ರಾಯ್ಟರ್ಸ್‌ ಗೆ ಸಂತಾಪಗಳು" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಫೋಟೊ ಜರ್ನಲಿಸ್ಟ್ ಆಗಿ, ದಾನಿಶ್ ಸಿದ್ದಿಕಿ ಪ್ರಪಂಚದಾದ್ಯಂತದ ವ್ಯಾಪಕವಾದ ಹಲವು ಸಮಸ್ಯೆಗಳನ್ನು ವರದಿ ಮಾಡಿದ್ದರು. ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಗ್ ಕಾಂಗ್ ಪ್ರತಿಭಟನೆಗಳು ಮತ್ತು ನೇಪಾಳದ ಭೂಕಂಪಗಳನ್ನು ವರದಿ ಮಾಡಿದ್ದರು.

ಕಳೆದ ಕೆಲವು ದಿನಗಳಿಂದ, ದಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದ ಕಂದಹಾರ್ನಲ್ಲಿ ನ ಪರಿಸ್ಥಿತಿಯ ಕುರಿತು ವರದಿ ಮಾಡುತ್ತಿದ್ದರು.. ಅವರು ಕೆಲವು ಕಾರ್ಯಾಚರಣೆಗಳಲ್ಲಿ ಅಫಘಾನ್ ವಿಶೇಷ ಪಡೆಗಳೊಂದಿಗೆ ಸೇರಿಕೊಂಡು ವರದಿ ತಯಾರಿಸುತ್ತಿದ್ದರು ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಅಫ್ಘಾನ್ ವಿಶೇಷ ಪಡೆಗಳು ತಾಲಿಬಾನ್ ದಾಳಿಗೆ ಒಳಗಾದಾಗ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

ನಾವು ತುರ್ತಾಗಿ ಹೆಚ್ಚಿನ ಮಾಹಿತಿಗಳನ್ನು ಕೋರಿದ್ದೇವೆ ಮತ್ತು ಪ್ರದೇಶದಲ್ಲಿಯ ಅಧಿಕಾರಿಗಳ ಸಂಪರ್ಕದಲ್ಲಿದ್ದೇವೆ ಎಂದು ರಾಯಟರ್ಸ್ ಅಧ್ಯಕ್ಷ ಮೈಕೆಲ್ ಫ್ರಿಡೆನ್ಬರ್ಗ್ ಮತ್ತು ಮುಖ್ಯ ಸಂಪಾದಕಿ ಅಲೆಸಾಂಡ್ರಾ ಗಲೋನಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಡ್ಯಾನಿಷ್ ಅಪ್ರತಿಮ ಪತ್ರಕರ್ತ,ಪ್ರೀತಿಯ ಪತಿ ಮತ್ತು ತಂದೆಯಾಗಿದ್ದರು ಹಾಗೂ ಹೆಚ್ಚಾಗಿ ಪ್ರೀತಿಸಲ್ಪಡುತ್ತಿದ್ದ ಸಹೋದ್ಯೋಗಿಯಾಗಿದ್ದರು. ಈ ಸಂಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದೊಂದಿಗಿದ್ದೇವೆ ’ಎಂದು ಹೇಳಿಕೆಯು ತಿಳಿಸಿದೆ.

ಶುಕ್ರವಾರ ಘರ್ಷಣೆಗಳನ್ನು ಚಿತ್ರೀಕರಿಸುತ್ತಿದ್ದಾಗ ಗುಂಡಿನಿಂದ ತೋಳಿಗೆ ಗಾಯವಾಗಿದೆ ಎಂದು ಸಿದ್ದಿಕಿ ರಾಯಟರ್ಸ್ ಗೆ ತಿಳಿಸಿದ್ದರು. ತಾಲಿಬಾನಿ ಹೋರಾಟಗಾರರು ಬೋಲ್ಡಾಕ್ನಿಂದ ಹಿಂದೆ ಸರಿಯುತ್ತಿದ್ದಾಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರು.

ತಾಲಿಬಾನ್ ಮತ್ತೊಮ್ಮೆ ದಾಳಿ ನಡೆಸಿದಾಗ ಸಿದ್ದಿಕಿ ಅಂಗಡಿಕಾರರೊಂದಿಗೆ ಮಾತನಾಡುತ್ತಿದ್ದರು ಎಂದು ಅಫಘಾನ್ ಕಮಾಂಡರ್ ತಿಳಿಸಿದರು. ಕಮಾಂಡರ್ ಹೇಳಿರುವಂತೆ ತಾಲಿಬಾನ್ ಮತ್ತೊಮ್ಮೆ ದಾಳಿ ನಡೆಸಿದ್ದರ ವಿವರಗಳನ್ನು ಸ್ವತಂತ್ರವಾಗಿ ದೃಢಪಡಿಸಿಕೊಳ್ಳಲು ರಾಯಟರ್ಸ್ ಗೆ ಸಾಧ್ಯವಾಗಿಲ್ಲ. ಸಿದ್ದಿಕಿ ರೊಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ವರದಿಗಾರಿಕೆಗಾಗಿ 2018ರ ಪುಲಿಟ್ಝರ್ ಪ್ರಶಸ್ತಿಯನ್ನು ಗೆದ್ದಿದ್ದ ರಾಯಟರ್ಸ್ ಫೋಟೊಗ್ರಫಿ ತಂಡದ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News