×
Ad

ಬಿಸಿರೋಡ್- ಗುಂಡ್ಯ ರಸ್ತೆ ಕಾಂಕ್ರಿಟೀಕರಣ : ಸೆಪ್ಟಂಬರ್‌ನಲ್ಲಿ ಕಾಮಗಾರಿಗೆ ಚಾಲನೆ

Update: 2021-07-17 15:17 IST

ಮಂಗಳೂರು, ಜು. 17: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಬಿ.ಸಿ.ರೋಡ್‌ನಿಂದ ಪೆರಿಯ ಶಾಂತಿ (48 ಕಿ.ಮೀ) ಹಾಗೂ ಪೆರಿಯಶಾಂತಿಯಿಂದ ಗುಂಡ್ಯ ಅಡ್ಡಹೊಳೆ (15 ಕಿ.ಮೀ.)ವರೆಗಿನ ಸುಮಾರು 1450 ಕೋಟಿ ರೂ. ಗಳ ರಸ್ತೆ ಚತುಷ್ಪಥ ಕಾಮಗಾರಿ ಸೆಪ್ಟಂಬರ್‌ನಲ್ಲಿ ಆರಂಭಗೊಳ್ಳಲಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಕಾರಿ ಇಂಜಿನಿಯರ್ ಶಿಶುಮೋಹನ್ ಮಾಹಿತಿ ನೀಡಿದರು.

ಬಿ.ಸಿ.ರೋಡ್‌ನಿಂದ ಪೆರಿಯ ಶಾಂತಿ ಕಾಮಗಾರಿಗೆ ತಾಂತ್ರಿಕ ಬಿಡ್ ಅಂತಿಮವಾಗಿರುತ್ತದೆ. ಪೆರಿಯಶಾಂತಿಯಿಂದ ಅಡ್ಡಹೊಳೆ ಕಾಮಗಾರಿಗೆ ಸಂಬಂಧಿಸಿ ಅರಣ್ಯ ಇಲಾಖೆಯಿಂದ ರಸ್ತೆ ತಿರುವಿಗೆ ಅನುಮತಿ ಕೋರಲಾಗಿದೆ. ಕಾಮಗಾರಿಯು ಮಹಾರಾಷ್ಟ್ರದ ಮೆಸರ್ಸ್ ಎಸ್‌ಎಂ ಔಟೆಡ್ ಪ್ರೈ. ಲಿ.ಗೆ ನೀಡಲಾಗಿದ್ದು, 2021ರ ಸೆಪ್ಟಂಬರ್‌ನಲ್ಲಿ ಆರಂಭಗೊಂಡು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಿಶುಮೋಹನ್ ವಿವರ ನೀಡಿದರು.

ಅರ್ಹರಿಗೆ ವಸತಿ- ನಿವೇಶನ ಹಂಚಿಕೆ ವೈಜ್ಞಾನಿಕ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಬಂಟ್ವಾಳದ ಪಲ್ಲಮಜಲು ಎಂಬಲ್ಲಿ 4.20 ಎಕರೆ ಪುರಸಭೆಗೆ ನಿವೇಶನಕ್ಕಾಗಿ ಮಂಜೂರಾಗಿದೆ. ಆದರೆ ಆ ಜಾಗ ಜಲ್ಲಿ ಕೋರೆಯಾಗಿದ್ದು, ಅದು ವಸತಿಗೆ ಪೂರಕವಾಗಿಲ್ಲ. ನಾನು ಶಾಸಕನಾಗುವ ಮೊದಲೇ ಆ ಜಾಗವನ್ನು ನೀಡಲಾಗಿದ್ದರೂ ಯಾರೊಬ್ಬರೂ ಅಲ್ಲಿ ಮನೆಕಟ್ಟಲು ಮುಂದಾಗಿಲ್ಲ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಅಸಮಾಧಾನ ವ್ಯಕ್ತಪಡಿಸಿದರು.

ಆ ಜಾಗವನ್ನು ರದ್ದುಪಡಿಸಿ ಪರ್ಯಾಯ ಜಾಗ ನೀಡುವುದು ಸೂಕ್ತ ಎಂದು ಸಂಸದ ನಳಿನ್ ಕುಮಾರ್ ಸಲಹೆ ನೀಡಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಅಲ್ಲಿ ಜಿ+1 ವಸತಿ ಸಂಕೀರ್ಣ ಮಾದರಿಯಲ್ಲಿ ಮನೆ ಕಟ್ಟಲು ಸಾಧ್ಯವಾಗುವುದಾದರೆ, ಫಲಾನುಭವಿಗಳ ಸಭೆ ನಡೆಸಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು.

ಕೋಟೆಕಾರು ಪಟ್ಟಣ ಪಂಚಾಯತ್ ಘನತ್ಯಾಜ್ಯ ನಿರ್ವಹಣೆ ಕುರಿತಾದ ಚರ್ಚೆಯ ವೇಳೆ ಪ್ರತಿಕ್ರಿಯಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ವಸತಿ ಸಂಕೀರ್ಣಗಳನ್ನು, ವಸತಿಗಳನ್ನು ಹಂಚಿಕೆ ವೇಳೆ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ವೈಜ್ಞಾನಿಕ ಕ್ರಮಗಳೊಂದಿಗೆ ಸೂಕ್ತ ವ್ಯವಸ್ಥೆ ಯನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೋಟೆಕಾರು ಗ್ರಾಮದಲ್ಲಿ ಒಂದು ವಾರದೊಳಗೆ ನಿಗದಿತ ಜಾಗದಲ್ಲಿ ತ್ಯಾಜ್ಯ ಘಟಕ ರಚನೆಯ ಪ್ರಗತಿಯನ್ನು ಆಡಳಿತಾಧಿಕಾರಿ ಮೂಲಕ ಮಾಡಿಸಿ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.

ಪಂಪ್‌ವೆಲ್‌ನಲ್ಲಿ ಕೃತಕ ನೆರೆ ಮಾಧ್ಯಮ ಸೃಷ್ಟಿ!

ಪಂಪ್‌ವೆಲ್, ಕೊಟ್ಟಾರ ಚೌಕಿ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ತಳಭಾಗದಲ್ಲಿ ಮಳೆಯ ಸಂದರ್ಭ ಕೃತಕ ನೆರೆ ಸೃಷ್ಟಿಯಾಗುತ್ತಿರುವ ಬಗ್ಗೆ ದೂರು ಬರುತ್ತಿರುವುದಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾ.ಹೆ.ಪ್ರಾಧಿಕಾರದ ಕಾರ್ಯಕಾರಿ ಇಂಜಿನಿಯರ್ ಶಿಶುಮೋಹನ್, ಪಂಪ್‌ವೆಲ್‌ನಲ್ಲಿ ನೀರು ನಿಲ್ಲುವುದು ಮಾಧ್ಯಮದ ಸೃಷ್ಟಿ. ಅವರು ಕ್ಯಾಮರಾದಲ್ಲಿ ಝೂಮ್ ಮಾಡಿ ತೋರಿಸುತ್ತಿದ್ದಾರೆ ಎಂದರು.

ಈ ಸಂದರ್ಭ ಜಿಲ್ಲಾಧಿಕಾರಿ ಮಾತನಾಡಿ, ಕೊಟ್ಟಾರ ಚೌಕಿ, ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಪ್ರದೇಶಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುವ ಕುರಿತಂತೆ ಸ್ಥಳೀಯಾಡಳಿತ ನೋಡಲ್ ಅಧಿಕಾರಿಗಳನ್ನು ನೇಮಿಸಿ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News