10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆ
ಉಡುಪಿ, ಜು.17: ಕಳೆದ 15 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 2011ರಿಂದ ತಲೆಮರೆಸಿಕೊಂಡಿದ್ದ ಪ್ರಕರಣದ ಆರೋಪಿ ಯೊಬ್ಬನನ್ನು ಉಡುಪಿ ನಗರ ಪೊಲೀಸರು ಜು.17ರಂದು ಬಂಧಿಸಿದ್ದಾರೆ.
ಉಡುಪಿ ಹನುಮಂತ ನಗರದ ನಿವಾಸಿ ಹೈದರ್(35) ಬಂಧಿತ ಆರೋಪಿ. ಉಡುಪಿ ನಗರದ ಲಾಡ್ಜ್ನಲ್ಲಿ ರೂಂ ಮಾಡಿಕೊಂಡಿದ್ದ ಪಿ.ಸಿ. ಜಗನಾಥ ಎಂಬ ವರಲ್ಲಿ ಬಾಕಿ ಇರುವ ಹಣವನ್ನು ಕೊಡುವುದಾಗಿ ಹೇಳಿ ವಸಂತ್ ಭಕ್ತ ಎಂಬಾತನು 2006ರ ಮೇ 20ರಂದು ತನ್ನ ಬೈಕ್ನಲ್ಲಿ ಉದ್ಯಾವರಕ್ಕೆ ಕರೆದು ಕೊಂಡು ಹೋಗಿದ್ದರು. ಅಲ್ಲಿ ವಸಂತ ಭಕ್ತ ಹಾಗೂ ಗಣೇಶ್ ಭಕ್ತ ಎಂಬವರು ಮೊದಲೇ ತಂದಿದ್ದ ಸೈನೆಡ್ ಬೆರೆಸಿದ ತಂಪು ಪಾನಿಯವನ್ನು ಜಗನ್ನಾಥ್ಗೆ ಕುಡಿಯಲು ನೀಡಿದರು. ಹೀಗೆ ಜಗನ್ನಾಥ್ರನ್ನು ಕೊಲೆ ಮಾಡಿದ ನಂತರ ಮೃತದೇಹವನ್ನು ಹೈದರ್ ಕಾರಿನಲ್ಲಿ ತೆಗೆದುಕೊಂಡು ಹೋಗಿ ಕಕ್ಕಸು ಗುಂಡಿ ಯಲ್ಲಿ ಎಸೆದಿದ್ದನು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಮೂರನೇ ಆರೋಪಿಯಾದ ಹೈದರ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ 2011ರಿಂದ ತಲೆಮರೆಸಿಕೊಂಡಿದ್ದನು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಉಡುಪಿ ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಮಾರ್ಗ ದರ್ಶನದಲ್ಲಿ ಎಸ್ಸೈ ಅಶೋಕ್ ಕುಮರ್, ಎಎಸ್ಸೈ ವಿಜಯ್, ಮನೋಹರ್, ಲೋಕೇಶ್ ಮತ್ತು ಆಶಾ ಈ ಕಾರ್ಯಾಚರಣೆ ನಡೆಸಿದ್ದಾರೆ.