ಬಂಟ್ವಾಳ ತಾಲೂಕಿನ 600 ಎಕರೆ ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ: ಶಾಸಕ ರಾಜೇಶ್ ನಾಯ್ಕ್ ಚಾಲನೆ

Update: 2021-07-18 16:15 GMT

ಬಂಟ್ವಾಳ, ಜು.18: 'ಹಡಿಲು ಭೂಮಿಯಲ್ಲಿ ಕೃಷಿಕ್ರಾಂತಿ' ಎಂಬ ಬಂಟ್ವಾಳ ಶಾಸಕರ ಯೋಜನೆಯಂತೆ ಬಿಜೆಪಿ ಯುವಮೋರ್ಚಾ ತಂಡದ ವತಿ ಯಿಂದ ಬಂಟ್ವಾಳ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ಅವರ ಮುಂದಾಳತ್ವದಲ್ಲಿ ತಾಲೂಕಿನ ಅಮ್ಮುಂಜೆ ಪರಿಸರದ ಸುಮಾರು 5 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ರವಿವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಯುವ ಸಮುದಾಯ ಕೃಷಿಯತ್ತ ಒಲವು ತೋರಿದರೆ ಈ ದೇಶದಲ್ಲಿ ಕೃಷಿಯಲ್ಲಿ ಮಹತ್ತರವಾದ ಬದಲಾವಣೆ ಸಾಧ್ಯ. ಈ ವರ್ಷ ಜಿಲ್ಲೆಯಲ್ಲಿ ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ ಮಾಡಲು ಬಿಜೆಪಿ ಹೆಚ್ಚಿನ ಒತ್ತು ನೀಡಿದೆ‌. ತಾಲೂಕಿನಲ್ಲಿ ಸುಮಾರು 600 ಎಕರೆ ಯಷ್ಟು ಹಡಿಲು ಬಿದ್ದ ಕೃಷಿಗೆ ಭೂಮಿಗೆ ಕಾಯಕಲ್ಪ ನೀಡಲು ಬಿಜೆಪಿ ಯುವಮೋರ್ಚಾ ಮುಂದಾಗಿದೆ ಎಂದರು‌. 

ಕ್ಷೇತ್ರದ ಉಳಿದ ಆರು ಮಹಾ ಶಕ್ತಿಕೇಂದ್ರದಲ್ಲಿಯೂ ಕೂಡ ಹಡಿಲು ಭೂಮಿಯಲ್ಲಿ ರೀತಿಯಲ್ಲಿ ವ್ಯವಸ್ಥಿತವಾಗಿ ಕೃಷಿಕ್ರಾಂತಿ ನಡೆಸುವ ಯೋಜನೆ ಯನ್ನು ಹಾಕಲಾಗಿದೆ. ಹತ್ತು ವರ್ಷಗಳ ಹಿಂದೆಯೇ ತುಳು ನಾಡ ಕೃಷಿ ಕ್ರಾಂತಿ ಎಂಬ ಯೋಜನೆಯಡಿ ಕೃಷಿ ಚಟುವಟಿಕೆ ಆರಂಭ ಮಾಡಿತ್ತು. ಪ್ರಸಕ್ತ ಬಿಜೆಪಿ ಯುವಮೋರ್ಚಾ ಈ ಯೋಜನೆಗೆ ಮುತುವರ್ಜಿ ವಹಿಸಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ದೇಶದ ಆರ್ಥಿಕ ವ್ಯವಸ್ಥೆಗೆ ಬಲ ತಂದಿದೆ ಎಂದು ಹೇಳಿದರು.

ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಸರಕಾರದ ವಿಶೇಷ ಸವಲತ್ತುಗಳನ್ನು ಪಡೆದುಕೊಂಡು ರೈತರು ಸ್ವಯಂ ಪ್ರೇರಿತರಾಗಿ ಕೃಷಿ ಮಾಡಬೇಕು ಎಂಬುದು ಪ್ರಧಾನಿ ಮೋದಿ ಅವರ ಕನಸು ಆಗಿದ್ದು ಎಲ್ಲಾ ಕೃಷಿಕರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಕೃಷಿ ಕ್ರಾಂತಿಯ ಯೋಚನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹಡಿಲು ಬಿದ್ದ ಎಲ್ಲಾ ಕೃಷಿ ಭೂಮಿಗಳು ಸಾಗುವಳಿಗೆ ಒಳಪಡಲಿ ಎಂದರು.

ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಬಿಜೆಪಿ ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕ್ಷೇತ್ರ ಕಾರ್ಯದರ್ಶಿ ರಮಾನಾಥ್ ರಾಯಿ, ಜಿಲ್ಲಾ ಕಾರ್ಯಕಾರಣಿ ಸದಸ್ಯ ವಿನಿತ್ ಶೆಟ್ಟಿ ಪೆರಾಜೆ, ಪ್ರಶಾಂತ್ ಕುಲಾಲ್ ಸಹಿತ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News