ಎಸ್ಎಸ್ಎಲ್ ಸಿ ಪರೀಕ್ಷೆ: ಪುತ್ತೂರಿನಲ್ಲಿ 5232 ವಿದ್ಯಾರ್ಥಿಗಳು ಹಾಜರಿ
ಪುತ್ತೂರು: ಅವಿಭಜಿತ ತಾಲೂಕು ಆಗಿರುವ ಪುತ್ತೂರು ಮತ್ತು ಕಡಬ ತಾಲ್ಲೂಕಿನಲ್ಲಿ ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯ ಮೊದಲ ದಿನವಾದ ಸೋಮವಾರ ಒಟ್ಟು 5232 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಎಸ್ಎಸ್ಎಲ್ ಸಿ ಪರೀಕ್ಷೆಗೆ ಮರುಪರೀಕ್ಷೆ ಕಟ್ಟಿದವರು ಸೇರಿದಂತೆ ಒಟ್ಡು 5525 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಸೋಮವಾರ ಒಟ್ಟು 5240 ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಆದರೆ 5232 ವಿದ್ಯಾರ್ಥಿಗಳು ಹಾಜರಾಗಿದ್ದರು. 8 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
2 ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮೂವರು ವಿದ್ಯಾರ್ಥಿಗಳಿಗೆ ಅವಕಾಶ
ಅವಿಭಜಿತ ತಾಲೂಕಿನ 25 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನಿ ನಡೆಸಲಾಗಿತ್ತು. ಪುತ್ತೂರು ತಾಲೂಕಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಓರ್ವ ವಿದ್ಯಾರ್ಥಿ ಹಾಗೂ ಕಡಬ ಕೋವಿಡ್ ಕೇರ್ ಸೆಂಟರ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕೋವಿಡ್ ಕೇರ್ ಸೆಂಟರ್ ನಲ್ಲಿ ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆಯ ನೇತ್ರತ್ವದಲ್ಲಿ ಮನೆಯಿಂದಲೇ ವಾಹನದ ಮೂಲಕ ಕೇಂದ್ರಕ್ಕೆ ಕರೆತರಲಾಗಿತ್ತು.
ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸುವ ನಿಟ್ಟಿನಲ್ಲಿ 25 ಪರೀಕ್ಷಾ ಕೇಂದ್ರಗಳಿಗೆ 600 ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿತ್ತು. ಇದರೊಂದಿಗೆ ಶಿಕ್ಷಕರು, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಪೊಲೀಸ್, ಅರೋಗ್ಯ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳ ಸೇವೆಯನ್ನು ಬಳಸಿಕೊಳ್ಳಲಾಗಿತ್ತು.
ಸುರಕ್ಷತಾ ಕ್ರಮ
ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಮಾಡಲಾಗಿತ್ತು.ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬರುವ ಮೊದಲು ಕೇಂದ್ರದ ಎಲ್ಲಾ ಪರೀಕ್ಷಾ ಕೊಠಡಿಗಳನ್ಮು ಸ್ಯಾನಿಟೈಸ್ ಮಾಡಲಾಗಿತ್ತು. ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚೌಕಗಳನ್ನು ನಿರ್ಮಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಅಲ್ಲದೆ ಪರೀಕ್ಷಾ ಕೊಠಡಿಯಲ್ಲಿ ಒಂದು ಬೆಂಚಿನಲ್ಲಿ ಒಂದು ವಿದ್ಯಾರ್ಥಿಗೆ ಮಾತ್ರ ಕುಳಿತು ಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
82 ವಿಶೇಷ ಚೇತನ ವಿದ್ಯಾರ್ಥಿಗಳು
ಪರೀಕ್ಷೆಗೆ ಈ ದಿನ ಒಟ್ಟು 82 ವಿಶೇಷ ಚೇತನ ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಿಗೆ ಎಲ್ಲಾ ವಿಶೇಷ ಸೌಲಭ್ಯ ಗಳೊಂದಿಗೆ ಪರೀಕ್ಷೆ ಬರೆ ಯಲು ವ್ಯವಸ್ಥೆ ಮಾಡಲಾಗಿತ್ತು. ಗಡಿ ಭಾಗವಾದ ಕೇರಳ ರಾಜ್ಯ ಸೇರಿದಂತೆ ಹೊರ ಜಿಲ್ಲೆಗಳ 8 _ಶಾಲೆಗಳ 72 ವಿದ್ಯಾರ್ಥಿಗಳು ಪುತ್ತೂರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ 62 ವಿದ್ಯಾರ್ಥಿ ಗಳು ಈಶ್ವರಮಂಗಲ ಗಜಾನನ ಪ್ರೌಢ ಶಾಲೆ, 8 ವಿದ್ಯಾರ್ಥಿಗಳು ಸುಧಾನ ಪ್ರೌಢ ಶಾಲೆ ಹಾಗೂ ಇಬ್ಬರು ವಿವೇಕಾನಂದ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.
''ಎಲ್ಲಾ 25 ಪರೀಕ್ಷಾ ಕೇಂದ್ರಗಳಲ್ಲಿಯೂ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ವಿವಿಧ ಇಲಾಖೆಗಳ ಸಹಕಾರದಲ್ಲಿ ಪರೀಕ್ಷಾ ವ್ಯವಸ್ಥೆ ಮಾಲಾಗಿದೆ. ಸೋಮವಾರದಂದು 8 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಯಾವುದೇ ಸಮಸ್ಯೆಗಳು ಇಲ್ಲದೆ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಯುತ್ತಿದೆ''.
- ಸಿ.ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು