ಗಟ್ಟಿ, ಧೈರ್ಯದ ನಿರ್ಧಾರ ತೆಗೆದುಕೊಳ್ಳುವವರು ಸಿಎಂ ಆಗಲಿ: ರಘುಪತಿ ಭಟ್
ಉಡುಪಿ, ಜು.26: ಕರಾವಳಿ ಅಭಿವೃದ್ಧಿ ಮಾಡುವ ನಾಯಕ ಮುಂದಿನ ಮುಖ್ಯಮಂತ್ರಿ ಆಗಬೇಕು. ಗಟ್ಟಿ ಹಾಗೂ ಧೈರ್ಯದ ನಿರ್ಧಾರ ತೆಗೆದು ಕೊಳ್ಳುವವರು ಮತ್ತು ಅಧಿಕಾರಿಗಳಲ್ಲಿ ಕೆಲಸ ಮಾಡಿಸುವ ಶಕ್ತಿಶಾಲಿ ನಾಯಕ ಸಿಎಂ ಆಗಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಎರಡು ವರ್ಷ ಯಶಸ್ವಿ ಆಡಳಿತ ನಡೆಸಿದ್ದಾರೆ. ಮುಂದಿನ ಮುಖ್ಯಮಂತ್ರಿಗಳ ಆಯ್ಕೆ ಬಗ್ಗೆ ಶಾಸಕಾಂಗ ಸಭೆ ಕರೆದು ನಮ್ಮ ಅಭಿಪ್ರಾಯವನ್ನು ಕೇಳಬಹುದೆಂದು ಭಾವಿಸಿದ್ದೇವೆ ಎಂದರು.
ಬಿಎಸ್ವೈ ರಾಜೀನಾಮೆ ನೀಡಿದ್ದು, ಪಕ್ಷದ ಕಾರ್ಯಕರ್ತರರಲ್ಲರಿಗೆ ಬೇಸರದ ಸಂಗತಿ. ಭಾವನಾತ್ಮಕ ಜೀವಿಗಳಿಗೆ ಕಣ್ಣೀರು ಬರುತ್ತದೆ. ಭಾವನೆಯಿಲ್ಲದ ಕಟೋರಿಗಳಿಗೆ ಕಣ್ಣೀರು ಬರೋದಿಲ್ಲ. ಕೇವಲ ವ್ಯವಹಾರ ನಡೆಸುವವರಿಗೆ ಕಣ್ಣೀರು ಬರುವು ದಿಲ್ಲ. ಯಡಿಯೂರಪ್ಪನವರಿಗೆ ಕಣ್ಣೀರು ಬಂದಿರುವುದು ಸ್ವಾಭಾವಿಕ. ಡಿಕೆಶಿ ಸಿದ್ದರಾಮಯ್ಯ ಕಠೋರ ಮನಸ್ಸಿನವರು. ಆ ಇಬ್ಬರಿಗೆ ಕಣ್ಣೀರು ಬರುವುದಿಲ್ಲ. ಯಡಿಯೂರಪ್ಪ ಒತ್ತಡದಿಂದ ರಾಜೀನಾಮೆ ಕೊಟ್ಟದ್ದಲ್ಲ. ಪಕ್ಷದ ಸಿದ್ಧಾಂತವನ್ನು ಒಪ್ಪಿ ಸಂತೋಷದಿಂದ ರಾಜೀನಾಮೆ ಕೊಟ್ಟಿದ್ದಾರೆ ಎಂದು ಶಾಸಕ ಭಟ್ ತಿಳಿಸಿದರು.