ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಅನಾರೋಗ್ಯ ಕಡಿಮೆ -ಡಾ.ಎನ್. ಕಿಶೋರ್ ಆಳ್ವ

Update: 2021-07-29 13:13 GMT

ಮಂಗಳೂರು : ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಅನಾರೋಗ್ಯದ ಸಮಸ್ಯೆ ಕಡಿಮೆ ಎಂದು  ಖ್ಯಾತ ವೈದ್ಯರು ಮತ್ತು ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ ಪೆಥಾಲಜಿ ವಿಭಾಗದ ಪ್ರೊ. ಡಾ. ನಂದ ಕಿಶೋರ್ ಆಳ್ವ ಮಿತ್ತಳಿಕೆ ತಿಳಿಸಿದ್ದಾರೆ.

ಅಳಿಕೆ ಗ್ರಾಮದ ಮಿತ್ತಳಿಕೆಯ (ಚೆಂಡುಕಳ)  ಗದ್ದೆಯಲ್ಲಿ  ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಮತ್ತು ಮಿತ್ತಳಿಕೆಗುತ್ತು ಕುಟುಂಬಸ್ಥರ ಸಹಕಾರದೊಂದಿಗೆ ಹಮ್ಮಿಕೊಂಡ ಭತ್ತದ ಕೃಷಿಕರೊಂದಿಗೆ ಪತ್ರಕರ್ತರ ಸಾಮೂಹಿಕ ಭತ್ತದ ನಾಟಿ  ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ದರು.

ಕೊರೋನ ಸಂದರ್ಭದಲ್ಲಿ ಹಲವಾರು ಮಂದಿ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡಿದ್ದೇನೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ರೋಗ ಪೀಡಿತರಾಗಿರುವುದು ಕಡಿಮೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ ಎಂದು ಡಾ.ಕಿಶೋರ್ ಆಳ್ವ ಅಭಿಪ್ರಾಯಪಟ್ಟರು. ಕೃಷಿ ಚಟುವಟಿಕೆಗಳೊಂದಿಗೆ ನಮ್ಮ ಮೂಲ ಸಂಸ್ಕೃತಿ ಬೆಸೆದುಕೊಂಡಿದೆ. ಆ ಕಾರಣ ಸುಶಿಕ್ಷಿತರೂ ಕೃಷಿ ಸಂಸ್ಕೃತಿಯಿಂದ ವಿಮುಖರಾಗಬಾರದು ಎಂದು ಡಾ.ಕಿಶೋರ್ ಆಳ್ವ ಹೇಳಿದರು.

ದ.ಕ.ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಎಚ್.ಜಿ. ಅವರು ನೇಜಿ ನೆಡುವ ಮೂಲಕ ಕಾರ್ಯಕ್ರ‌ಮಕ್ಕೆ ಚಾಲನೆ ನೀಡಿದರು. ಮಿತ್ತಳಿಕೆ ಕುಟುಂಬದ ಹಿರಿಯರಾದ ಸುಗಂಧ ಆರ್. ಸಾಮಾನಿಯವರು ಹಾರೈಸಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ತಾಲೂಕು ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಅಳಿಕೆ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಕೆ., ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಿತ್ತಳಿಕೆ ಕುಟುಂಬದ ಹಿರಿಯರಾದ ಸಂಕಪ್ಪ ಶೇಖ, ಸೀತಾರಾಮ ಶೆಟ್ಟಿ, ಡಾ. ಕಿಶೋರ್ ಆಳ್ವ, ದಯಾನಂದ ಆಳ್ವ, ಚಂದ್ರನಾಥ ಆಳ್ವ, ಕನ್ಯಾನ ಪಿಡಿಒ ವಿಜಯಶಂಕರ ಆಳ್ವ, ತಿಮ್ಮಪ್ಪ ಶೆಟ್ಟಿ ಅಳಿಕೆಗುತ್ತು, ರೂಪೇಶ್ ರೈ ಅಳಿಕೆಗುತ್ತು, ಕೇಪು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಧಾ ಕೃಷ್ಣ ಶೆಟ್ಟಿ ಚೆಲ್ಲಡ್ಕ, ಸದಾಶಿವ ಅಳಿಕೆ, ಸೂರ್ಯವಂಶ ಪ್ರತಿಷ್ಠಾನದ ಪ್ರತಿನಿಧಿ ಡಾ. ಗೋವರ್ಧನ ರಾವ್  ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಸ್ಕರ ರೈ ಕಟ್ಟ ಮತ್ತು ಕೋಶಾಧಿಕಾರಿ ಪುಷ್ಪರಾಜ ಬಿ.ಎನ್. ಕಾರ್ಯಕ್ರಮ ನಿರ್ವಹಿಸಿದರು.

ಪತ್ರಕರ್ತರಿಂದ ನೇಜಿ ನಾಟಿ -ಬೆಳೆದ ಪೈರು ಕೃಷಿ ಕಾರ್ಮಿಕರಿಗೆ :- ಮಿತ್ತಳಿಕೆಯ ಕುಟುಂಬದವರ ಗದ್ದೆಯಲ್ಲಿ ಪತ್ರಕರ್ತರು ಸೇರಿ ಗುರುವಾರ ನಾಟಿ ಮಾಡಿದ ಭತ್ತದ ಪೈರು  ಕಟಾವು ಬಳಿಕ ಅದನ್ನು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡ ಕೃಷಿಕರಿಗೆ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ವಿತರಣೆ ಮಾಡುವುದಾಗಿ  ಮಿತ್ತಳಿಕೆ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಮಿತ್ತಳಿಕೆ ಕುಟುಂಬದ ಗದ್ದೆಯಲ್ಲಿ ಬೆಳೆದ ಭತ್ತದ  ಫಸಲನ್ನು ಪಡೆದು ಆರ್ಥಿಕವಾಗಿ ಹಿಂದುಳಿದ  ಕುಟುಂಬಗಳಿಗೆ ಅದನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು  ದ.ಕ ಜಿಲ್ಲಾ ಕಾರ್ಯನಿರತ  ಪತ್ರಕರ್ತರ  ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಈ ಸಂದರ್ಭದಲ್ಲಿ ತಿಳಿಸಿದರು.

ಪತ್ರಕರ್ತರು ನೇಜಿ ನೆಟ್ಟು, ಯಂತ್ರದ ಮೂಲಕ ಉಳುಮೆ ಮಾಡುವ ಮೂಲಕ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News