ಕಪ್ಪುಹಣ ಬಿಳಿ ಮಾಡುವ ಆಮಿಷಕ್ಕೆ ಒಳಗಾಗಿ ಲಕ್ಷಾಂತರ ರೂ. ಕಳೆದುಕೊಂಡ ಪಿಡಬ್ಲ್ಯೂಡಿ ಕಾಂಟ್ರಾಕ್ಟರ್: ದೂರು

Update: 2021-07-30 10:11 GMT

ಮಂಗಳೂರು: ಕಪ್ಪುಹಣ ಬಿಳಿ ಮಾಡುವ ಆಮಿಷಕ್ಕೆ ಒಳಗಾಗಿ ಮಂಗಳೂರಿನ ಕಾವೂರು ಠಾಣೆ ವ್ಯಾಪ್ತಿಯ ವ್ಯಕ್ತಿಯೋರ್ವರು 9.20 ಲಕ್ಷ ರೂ‌. ಕಳೆದುಕೊಂಡ ಬಗ್ಗೆ ದೂರು ದಾಖಲಾಗಿದೆ‌.

ವೃತ್ತಿಯಲ್ಲಿ ಪಿ.ಡಬ್ಲ್ಯೂಡಿ ಗುತ್ತಿಗೆದಾರನಾಗಿರುವ ರೋಹಿದಾಸ್ ಎಂಬವರು, ಮನೆ ಕಟ್ಟಿ ಮಾರಾಟ ಮಾಡುವ ಉದ್ದೇಶದಿಂದ ದಿನ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದರು. ಜಾಹೀರಾತು ನೀಡಿದ ಒಂದು ವಾರದಲ್ಲಿ ನಿತಿನ್ ರಾಜ್ ಬೆಂಗಳೂರು ಮತ್ತು ಧನರಾಜ್ ವಿಟ್ಲ ಎಂಬವರು ಕರೆ ಮಾಡಿ, ತಾವು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದು, ನಮ್ಮ ಸಂಸ್ಥೆಯ ಮಾಲಕರಿಗೆ ಮಂಗಳೂರಿನಲ್ಲಿ ಮನೆ ಅಗತ್ಯತೆಯಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಅವರಿಂದ ಮನೆಗೆ 50 ಲಕ್ಷ ರೂ. ಸಾಲ ತೆಗೆಸಿಕೊಡುವುದಾಗಿಯೂ ಹೇಳಿದ್ದಾರೆ. ಬಳಿಕ ಧನರಾಜ್ ವಿಟ್ಲ ಸಂತ್ರಸ್ತ ರೋಹಿದಾಸ್​ರನ್ನು ಶ್ರೀರಂಗಪಟ್ಟಣಕ್ಕೆ ಬರಲು ಹೇಳಿದ್ದಾರೆ. ಈ ಸಂದರ್ಭ ನಿತಿನ್ ರಾಜ್ ಸಾಲದ ರೂಪವಾಗಿ 1.50 ಕೋಟಿ ರೂ. ಕಪ್ಪುಹಣವನ್ನು ನೀಡಿ, ಅದನ್ನು ಬಿಳಿ ಮಾಡಲು ತಿಳಿಸಿದ್ದಾರೆ. ಈ ಕಪ್ಪು ಬಣ್ಣದ ಕಾಗದವನ್ನು ಲಿಕ್ವಿಡ್ ನಂತೆ ತೋರುವ ನೀರಿಗೆ ಮುಳುಗಿಸಿ ತೆಗೆದಾಗ ಕಪ್ಪುಬಣ್ಣದ ಕಾಗದ 500 ರೂ. ನೋಟಿನ ರೂಪ ತಾಳಿದೆ. ಇದೇ ರೀತಿ ಮಾಡುವಂತೆ ಹೇಳಿ 1.5 ಕೋಟಿ ರೂ.ನ್ನು ರೋಹಿದಾಸ್​ಗೆ ನೀಡಿದ್ದಾರೆ ದೂರಲಾಗಿದೆ.

ಇದನ್ನು ನಂಬಿ ರೋಹಿದಾಸ್ ಹಣದ ಬ್ಯಾಗ್ ಹಾಗೂ ಲಿಕ್ವಿಡ್​ನ್ನು ವಿಟ್ಲದ ಧನರಾಜ್ ಕಾರಿನ ಡಿಕ್ಕಿಯಲ್ಲಿರಿಸಿ ಹೊರಟು ಬಂದಿದ್ದಾರೆ‌. ಆದರೆ ಒಂದು ಕಿ.ಮೀ. ಮುಂದೆ ಬಂದಾಗ ಕಾರಿನಲ್ಲಿ ಯಾವುದೋ ಶಬ್ದ ಕೇಳಿದ್ದು, ಧನರಾಜ್ ಕಾರು ನಿಲ್ಲಿಸಿ ಡಿಕ್ಕಿ ತೆರೆದು ನೋಡುವಾಗ ಲಿಕ್ವಿಡ್ ಕ್ಯಾನ್ ಕೆಳಗೆ ಬಿದ್ದು, ಎಲ್ಲವೂ ಚೆಲ್ಲಿದೆ. ತಕ್ಷಣ ಈ ಬಗ್ಗೆ ನಿತಿನ್ ರಾಜ್​ಗೆ ಕರೆಮಾಡಿ ನಡೆದ ವಿಷಯವನ್ನು ತಿಳಿಸಿದಾಗ ಆತ ಬಂದು ಲಿಕ್ವಿಡ್ ಚೆಲ್ಲಿರುವುದಕ್ಕೆ 25 ಲಕ್ಷ ರೂ. ನೀಡಬೇಕೆಂದು ಹೇಳಿದ್ದರು. ಬಳಿಕ ನಿತಿನ್ 10 ಲಕ್ಷ ರೂ. ರೆಡಿ ಮಾಡುತ್ತೇನೆ ಎಂದು ಹೇಳಿರುವುದಾಗಿ ವಿವರಿಸಿದ್ದಾರೆ. ನಂತರ ಕಾರಿನಲ್ಲಿರುವ ಕಪ್ಪುಬಣ್ಣದ ಕಾಗದದ ಬ್ಯಾಗನ್ನು ನಿತಿನ್ ತನ್ನ ಕಾರಿನಲ್ಲಿ ಇರಿಸಿ, ನೀವು ಕೂಡಲೇ ಊರಿಗೆ ಹೋಗಿ ಹಣವನ್ನು ನೀಡಿದರೆ ಲಿಕ್ವಿಡ್ ತರಿಸುವುದಾಗಿ ಅವರು ತಿಳಿಸಿದ್ದರು.

ಮರುದಿನ ವಿಟ್ಲದ ಧನರಾಜ್ ಕರೆ ಮಾಡಿ, ತಾನು ಹೇಗಾದರೂ ಮಾಡಿ 7 ಲಕ್ಷ ರೂ. ರೆಡಿ ಮಾಡುತ್ತೇನೆ. ತಾವು ಕೂಡ ಏನಾದರೂ ಮಾಡಿ ಎಂದಿದ್ದಾನೆ. ಈ ಬಗ್ಗೆ ಆತ ಪದೇ ಪದೇ ಪೋನ್ ಮಾಡುತ್ತಿದ್ದರಿಂದ ರೋಹಿದಾಸ್ ಹೆಂಡತಿ, ಮಕ್ಕಳ ಒಡವೆಗಳನ್ನು 7.20 ರೂ.ಗೆ ಅಡವಿಟ್ಟು ಅದಕ್ಕೆ ತನ್ನಲ್ಲಿದ್ದ 2 ಲಕ್ಷ ರೂ.ನ್ನೂ ಇರಿಸಿ ಒಟ್ಟು 9.20 ಲಕ್ಷ ರೂ. ನೀಡಿದ್ದಾರೆ. ಆದರೆ ಆ ಬಳಿಕ ಅವರು ಲಿಕ್ವಿಡ್, ಕಪ್ಪುಹಣ ನೀಡದೆ ಇಬ್ಬರು ತಮಗೆ ವಂಚಿಸಿದ್ದಾರೆಂದು ರೋಹಿದಾಸ್ ಕಾವೂರು ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News