ಕ್ಷಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಂಘಟಿತ ಪ್ರಯತ್ನ: ಡಾ.ಚಿದಾನಂದ

Update: 2021-07-30 13:42 GMT

ಬ್ರಹ್ಮಾವರ, ಜು.30: ಭಾರತವನ್ನು 2025ರ ಹೊತ್ತಿಗೆ ಕ್ಷಯಮುಕ್ತ ಮಾಡುವ ಸಂಕಲ್ಪಹೊಂದಲಾಗಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಹಂತದಿಂದಲೇ ಸಂಘಟಿತ ಪ್ರಯತ್ನಗಳು ಅಗತ್ಯವಿದೆ ಎಂದು ಉಡುಪಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಚಿದಾನಂದ ಸಂಜು ತಿಳಿಸಿದ್ದಾರೆ.

ಕಾಡೂರು ಗ್ರಾಪಂನಲ್ಲಿ ಇತ್ತೀಚೆಗೆ ಕ್ಷಯಮುಕ್ತ ಗ್ರಾಮಕ್ಕಾಗಿ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು. ವೈಯಕ್ತಿಕ ಜಾಗೃತಿ ಹಾಗೂ ವ್ಯವಸ್ಥಿತ ವೈದ್ಯಕೀಯ ಮೇಲ್ವಿಚಾರಣೆಗೆ ಆದ್ಯತೆ ನೀಡಲಾಗಿದೆ ಎಂದರು.

ಮಂದರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿ ನಡೂರು ಗ್ರಾಮದ ಮೂಲಕ ಸಮೀಕ್ಷೆಯನ್ನು ಆರಂಭಿಸಲಾಗುತ್ತಿದ್ದು ಆಶಾ ಕಾರ್ಯಕರ್ತರು, ಕಿರಿಯ ಆರೋಗ್ಯ ಸಹಾಯ ಕರು, ಎಸ್‌ಟಿಎಸ್, ಎಸ್‌ಟಿಎಲ್ಎಸ್, ಪಿಪಿಎಂಓ ಹಾಗೂ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಯವರ ಸಹಕಾರ ಪಡೆದು ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.

ಕಾಡೂರು ಗ್ರಾಪಂ ಅಧ್ಯಕ್ಷ ಪಾಂಡುರಂಗ ಶೆಟ್ಟಿ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ಇಲಾಖೆಗಳ ಕೆಲಸ ಕಾರ್ಯಗಳು ಉತ್ತಮವಾಗಿ ನಿರ್ವಹಣೆ ಆಗುತ್ತಿದ್ದು, ಕೋವಿಡ್ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದ ಮಾದರಿ ಯಲ್ಲಿ ಕ್ಷಯಮುಕ್ತ ಗ್ರಾಮ ಪರಿಕಲ್ಪನೆಯನ್ನು ಅನುಷ್ಠಾನ ಮಾಡಬೇಕೆಂದು ತಿಳಿಸಿದರು.

ಕಾಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಮಾತನಾಡಿ ಸಮೀಕ್ಷೆಯಲ್ಲಿ ಮಾಹಿತಿಯನ್ನು ಸಂಗ್ರಹ ಮಾಡುವುದರೊಂದಿಗೆ ಮಧುಮೇಹ, ಎಚ್‌ಐವಿ ಮತ್ತು ಎನ್ಟಿಪಿಸಿ ಪರೀಕ್ಷೆ, ಆಪ್ತಸಮಾಲೋಚನೆಯ ಉದ್ದೇಶವನ್ನು ಹೊಂದಿರುವುದರಿಂದ ನಾಗರಿಕರು ಈ ಸೌಲಭ್ಯವನ್ನು ಸದು ಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಡೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅಮಿತಾ, ಪಂಚಾಯತ್ ಸದಸ್ಯರು, ಕೋಟ ಆಸ್ಪತ್ರೆಯ ಎನ್‌ಸಿಡಿ ವಿಭಾಗದ ವೈದ್ಯಾಧಿಕಾರಿ ಡಾ.ಸ್ನೇಹ, ಮೇಲ್ವಿಚಾರಕರಾದ ಸುರೇಶ್, ಪ್ರಸಾದ್ ಶೆಟ್ಟಿ, ಆಶಾ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News