ಮಣಿಪಾಲ: ಕ್ರೀಡೆಯಲ್ಲಿ ನೈತಿಕ ಮತ್ತು ಕಾನೂನು ವಿವಾದ ವಿಚಾರಸಂಕಿರಣ
ಮಣಿಪಾಲ, ಜು.30: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಕ್ರೀಡಾ ಕೌನ್ಸಿಲ್, ಮಾಹೆ ಕ್ರೀಡಾ ವೆಬಿನಾರ್ ಸರಣಿಯಲ್ಲಿ ‘ಕ್ರೀಡೆಯಲ್ಲಿ ಕಾನೂನು ಹಾಗೂ ನೈತಿಕ ವಿವಾದಗಳು’ ಎಂಬ ವಿಷಯದ ಕುರಿತು ಎರಡು ದಿನಗಳ ಮೊದಲ ವೆಬಿನಾರ್ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಬುದವಾರ ಈ ವಿಚಾರಸಂಕಿರಣವನ್ನು ಉದ್ಘಾಟಿಸಿದ್ದು, ಇನ್ನು ಮುಂದೆ ಪ್ರತಿ ತಿಂಗಳು ಕ್ರೀಡಾ ವೆಬಿನಾರ್ ಸರಣಿಯಲ್ಲಿ ವಿಚಾರಸಂಕಿರಣಗಳನ್ನು ಆಯೋಜಿಸಲಾಗುವುದು ಎಂದರು.
ಇದರಲ್ಲಿ ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ನಿರ್ಮಲಾ ಕುಮಾರಿ ಕೆ. ಹಾಗೂ ಧಾರವಾಡದ ನಿವೃತ್ತ ಪ್ರಾಂಶುಪಾಲರಾದ ಡಾ.ಆನಂದ ನಾಡಿಗೇರ ಇವರು ‘ಕ್ರೀಡೆಯಲ್ಲಿ ಕಾನೂನು ವಿವಾದಗಳು’ ಎಂಬ ವಿಷಯದ ಮೇಲೆ ಮಾತನಾಡಿದರು.
ಮಾಹೆ ಕ್ರೀಡಾ ಕೌನ್ಸಿಲ್ನ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಹಾಗೂ ಜಂಟಿ ಕಾರ್ಯದರ್ಶಿ ಡಾ.ಶೋಭಾ ಎಂ.ಇ. ಇವರು ವಿಚಾರಸಂಕಿರಣವನ್ನು ನಡೆಸಿಕೊಟ್ಟರು. ಮಣಿಪಾಲ ಎಂಐಟಿಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ.ಉಪೇಂದ್ರ ನಾಯಕ್ ಅತಿಥಿಗಳನ್ನು ಪರಿಚಯಿಸಿದರೆ, ಕೆಎಂಸಿಯ ಡಾ.ದೀಪಕ್ ರಾಮ್ ಬಾಯರಿ ವಂದಿಸಿದರು.