ರತ್ನಗಿರಿಯ ನೆರೆಪೀಡಿತ ಪ್ರದೇಶಗಳಿಗೆ ತಂಝೀಮ್ ನಿಯೋಗ ಭೇಟಿ; ಸಂತ್ರಸ್ತ ಕುಟುಂಬಗಳಿಗೆ ನೆರವಿನ ಹಸ್ತ

Update: 2021-07-30 18:01 GMT

ಭಟ್ಕಳ, ಜು.30: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಹಾಡ್, ಚಿಪ್ಲೋನ್ ಮತ್ತು ಖೇಡ್‌ನ ಪ್ರವಾಹಪೀಡಿತ ಪ್ರದೇಶಗಳಿಗೆ ಭಟ್ಕಳದ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್‌ನ ನಿಯೋಗ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರ ಕಾರ್ಯಕ್ಕಾಗಿ ಕಾರ್ಯ ಯೋಜನೆ ರೂಪಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಿಯೋಗದ ನೇತೃತ್ವ ವಹಿಸಿದ್ದ ತಂಝೀಮ್ ಉಪಾಧ್ಯಕ್ಷ ಉದ್ಯಮಿ ಅತೀಕುರ್ರಹ್ಮಾನ್ ಮುನೀರಿ, ಜು.27ರಂದು ಮಹಾರಾಷ್ಟ್ರ ನೆರೆಭಾದಿತ ಪ್ರದೇಶಗಳಿಗೆ ಭೇಟಿ ನೀಡಿದ ತಂಝೀಮ್ ನಿಯೋಗವು ಅಲ್ಲಿನ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ ನಮ್ಮಿಂದಾದ ಸಹಾಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಿಯೋಗವು ಕೊಂಕಣ ಪ್ರದೇಶದ ಎಲ್ಲಾ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ ಮತ್ತು ಪರಿಸ್ಥಿತಿಯನ್ನು ಪರಿಶೀಲಿಸಿದೆ. ಇದರ ಸಮಗ್ರ ವರದಿಯನ್ನು ಸಿದ್ಧಗೊಳಿಸಿ, ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿಗೆ ಸಂಬಂಧಿಸಿದಂತೆ ತಂಝೀಮ್ ಸಂಸ್ಥೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸಾವಿರಾರು ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಜು.21ರಂದು ಸುರಿದ ಮಳೆಯು ಎಲ್ಲವನ್ನೂ ಸರ್ವ ನಾಶಗೊಳಿಸಿದೆ. ಜೀವನ ಹಾನಿಯೊಂದಿಗೆ ಕೋಟ್ಯಂತರ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಅಲ್ಲಿನ ಅಂಜುಮನ್-ಎ-ದದ್ಮಂರ್ದಾನ್ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯೂ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸದ್ಯಕ್ಕೆ ಆಹಾರಕ್ಕೆ ಕೊರತೆ ಇಲ್ಲ. ಅಕ್ಕಪಕ್ಕದ ಪ್ರದೇಶದವರು ಆಹಾರದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಆದರೆ, ಮನೆ ಅಂಗಡಿಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದು, ಅವರಿಗೆ ತೊಡಲು ಬಟ್ಟೆ ಇಲ್ಲವಾಗಿದೆ. ಹೊದ್ದುಕೊಳ್ಳಲು ಹೊದಿಕೆಗೆ, ಗ್ಯಾಸ್ ಒಲೆ, ಆರೋಗ್ಯ, ಇಲೆಕ್ಟ್ರೀಷನ್ ಮತ್ತಿತರ ಮೂಲಭೂತ ವಸ್ತುಗಳ ಅಗತ್ಯವಿದೆ. ಅವುಗಳನ್ನು ತಲುಪಿಸುವ ನಿಟ್ಟಿನಲ್ಲಿ ತಂಝೀಮ್ ಸಂಸ್ಥೆ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮಾಹಿತಿ ನೀಡಿದರು.

ಬಹುತೇಕ ರಸ್ತೆಬದಿಯ ಅಂಗಡಿ ಮತ್ತು ಮನೆಗಳು ಮಳೆಯಿಂದ ಹಾನಿಗೊಳಗಾದ ಸರಕುಗಳು ಮತ್ತು ಅವಶೇಷಗಳಿಂದ ತುಂಬಿವೆ. ಕೆಸರು ತುಂಬಿದ ರಸ್ತೆಗಳಲ್ಲಿ ಹೆಜ್ಜೆ ಹಾಕುವುದು ಕಷ್ಟಕರವಾಗಿತ್ತು. ಹೆಚ್ಚಿನ ಮನೆಗಳು ಮತ್ತು ಅಂಗಡಿಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ನಿಯೋಗದ ಸದಸ್ಯರು ಮಾಹಿತಿ ನೀಡಿದರು.

ನಿಯೋಗದಲ್ಲಿ ಇನಾಯತುಲ್ಲಾ ಶಾ ಬಾಂದ್ರಿ, ಇಸ್ಮಾಯೀಲ್ ಜುಬಾಪು, ಮೌಲಾನಾ ಎಸ್.ಎಂ.ಇರ್ಫಾನ್ ನದ್ವಿ, ಮೌಲ್ವಿ ಇರ್ಷಾದ್ ಅಲಿ ಆಫ್ರಿಕಾ ನದ್ವಿ, ಜೀಲಾನಿ ಸಿದ್ದೀಕ್, ಸಾದಿಕ್ ಮಟ್ಟಾ, ಯೂನುಸ್ ರುಕ್ನುದ್ದೀನ್, ಮುಬೀನ್ ದಾಮೋದಿ, ಇರ್ಷಾದ್ ಸಿದ್ದೀಕ್, ಫವಾಜ್ ಸುಕ್ರಿ, ಇಕ್ಬಾಲ್ ಸುಹೇಲ್, ಸೈಫುಲ್ಲಾ ಶರೀಫ್ ಬೈದಾ, ಇನಾಯತುಲ್ಲಾ ಮುಲ್ಲಾ ಮತ್ತು ಅಬ್ದುಲ್ ರಝಾಕ್ ಶೇಕ್ ಇದ್ದರು.

ನೆರವಿಗಾಗಿ ಮನವಿ: ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಅಂಕೋಲಾ ಸೇರಿದಂತೆ ಕೊಂಕಣ ಪ್ರದೇಶದ ಮಹಾರಾಷ್ಟ್ರ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಪರಿಹಾರ ಕಾರ್ಯಕೈಗೊಳ್ಳಲು ತಂಝೀಮ್ ಸಂಸ್ಥೆ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು, ದಾನಿಗಳು ಮುಂದೆ ಬಂದು ನೆರೆಬಾಧಿತರಿಗೆ ನೆರವಾಗಬೇಕೆಂದು ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News