ಆ.7ರವರೆಗೆ ಕಾಸರಗೋಡು-ಮಂಗಳೂರು ನಡುವಿನ ಬಸ್ ಸಂಚಾರ ನಿರ್ಬಂಧಿಸಿ: ದ.ಕ. ಡಿಸಿ ಆದೇಶ
Update: 2021-07-31 17:21 GMT
ಮಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ಕೊರೋನ ಸೋಂಕು ಹೆಚ್ಚುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಕಾಸರಗೋಡು ಹಾಗೂ ಮಂಗಳೂರು ನಡುವಿನ ಕೆಎಸ್ಸಾರ್ಟಿಸಿ ಮತ್ತು ಎಲ್ಲ ಖಾಸಗಿ ಬಸ್ಗಳ ಸಂಚಾರವನ್ನು ಒಂದು ವಾರದವರೆಗೆ ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಶನಿವಾರ ಆದೇಶ ಹೊರಡಿಸಿದ್ದಾರೆ.
ಆ. 1ರಿಂದ 7ರವರೆಗೆ ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾಸರಗೋಡಿನಿಂದ ದ.ಕ. ಜಿಲ್ಲೆಗೆ ದಿನಂಪ್ರತಿ ಪ್ರಯಾಣಿಸುವವರು, ಕಾಲೇಜು ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದಿದ್ದರೂ (2 ಡೋಸ್ ಆಗಿದ್ದರೂ) 72 ಗಂಟೆಗಳ ಒಳಗೆ ಮಾಡಿಸಿರುವ ಆರ್ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯ ಆಧಾರದಲ್ಲಿ ಏಳು ದಿನಗಳ ಅವಧಿಗೆ ಅನುಮತಿಸಲಾಗುವುದು ಎಂದು ತಿಳಿಸಿದ್ದಾರೆ.
ವೈದ್ಯಕೀಯ ತುರ್ತು ಸೇವೆ, ಆ್ಯಂಬುಲೆನ್ಸ್ ಹಾಗೂ ಅಂತರ್ ರಾಜ್ಯ ಸರಕು ಸಾಮಗ್ರಿಗಳ ಸಾಗಾಟಕ್ಕೆ ಈ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.