ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಅಪಘಾತದ ಕುರಿತು ಸಿಬಿಐ ತನಿಖೆ ಎತ್ತಿಹಿಡಿದ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ: 2019 ರಲ್ಲಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಅಪಘಾತದಲ್ಲಿ ಯಾವುದೇ ಕ್ರಿಮಿನಲ್ ಸಂಚು ನಡೆದಿದೆ ಎನ್ನುವುದನ್ನು ತಳ್ಳಿಹಾಕಿದ್ದ ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದ್ದ ತನಿಖೆಯನ್ನು ದಿಲ್ಲಿ ನ್ಯಾಯಾಲಯ ಎತ್ತಿಹಿಡಿದಿದೆ.
2019 ರಲ್ಲಿ, ಅತ್ಯಾಚಾರದ ಸಂತ್ರಸ್ತೆ, ಆಕೆಯ ಕುಟುಂಬ ಹಾಗೂ ವಕೀಲರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಾಯ್ ಬರೇಲಿಯಲ್ಲಿ ಅತಿ ವೇಗದಿಂದ ಬಂದ ಟ್ರಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಸಂತ್ರಸ್ತೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದರು. ಸಂತ್ರಸ್ತೆ ಹಾಗೂ ವಕೀಲರು ತೀವ್ರವಾಗಿ ಗಾಯಗೊಂಡಿದ್ದರು.
ಅಪಘಾತ ಘಟನೆಯ ಹಿಂದೆ ಪಿತೂರಿ ಅಡಗಿದೆ ಎಂದು ಅಪ್ರಾಪ್ತ ಸಂತ್ರಸ್ತೆಯ ಕುಟುಂಬದವರು ದೂರು ನೀಡಿದ ಬಳಿಕ ಅಪ್ರಾಪ್ತೆಯ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಹಾಗೂ ಇತರ 9 ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು.
ಈ ಆರೋಪಗಳನ್ನು ತಳ್ಳಿಹಾಕಿದ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಧರ್ಮೇಶ್ ಶರ್ಮಾ, ದೂರುದಾರರ ಪಕ್ಷದ ಆಕ್ಷೇಪಣೆಗಳು ರೋಮಾಂಚಕ ಕಥೆಯಂತೆ ಇವೆ. ಅವು ಕೇವಲ ಊಹೆಗಳು ಹಾಗೂ ಊಹೆಗಳನ್ನು ಆಧರಿಸಿವೆ ಎಂದು ಹೇಳಿದರು.
ಸಿಬಿಐ ನಡೆಸಿದ ತನಿಖೆಯ ನಿಷ್ಠೆ, ನಿಖರತೆ ಹಾಗೂ ಪ್ರಾಮಾಣಿಕತೆಯನ್ನು ಅನುಮಾನಿಸಲು ಯಾವುದೇ ಆಧಾರಗಳಿಲ್ಲ ಹಾಗೂ ಘಟನೆಯ ಸಮರ್ಥನೀಯ ಅಂಶವನ್ನು ಸಂಸ್ಥೆ ಹೊರಹಾಕಿದೆ ಎಂದು ಅವರು ಹೇಳಿದ್ದರು.
ಗಮನಾರ್ಹವಾಗಿ, ಎಫ್ಐಆರ್ನಲ್ಲಿ ಹೆಸರಿಸಲಾಗಿರುವ ಕುಲದೀಪ್ ಸೆಂಗಾರ್ ಸೇರಿದಂತೆ ಟ್ರಕ್ ಚಾಲಕ ಅಥವಾ ಕ್ಲೀನರ್ ಅಥವಾ ಅಪಘಾತ ನಡೆಸಿದ್ದ ಟ್ರಕ್ ನ ಮಾಲೀಕರ ನಡುವೆ ಕ್ರಿಮಿನಲ್ ಪಿತೂರಿಯ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಸಿಬಿಐ ತೀರ್ಮಾನಿಸಿತ್ತು.
"ಆರೋಪ ಪಟ್ಟಿಯಲ್ಲಿ ಸಿಬಿಐನ ನಿರ್ಣಯಗಳನ್ನುಎತ್ತಿಹಿಡಿಯಲು ನನಗೆ ಯಾವುದೇ ಹಿಂಜರಿಕೆಯಿಲ್ಲ, ಆರೋಪಿಗಳ ವಿರುದ್ಧ ಯಾವುದೇ ಕೇಸ್ ಗಳಿಲ್ಲ. ಐಪಿಸಿ 302 (ಕೊಲೆ) ಹಾಗೂ 307 (ಕೊಲೆ ಯತ್ನ) ಸೆಕ್ಷನ್ ಅಡಿಯಲ್ಲಿ ಐಪಿಸಿ 120 ಬಿ (ಕ್ರಿಮಿನಲ್ ಪಿತೂರಿ)ಅಡಿಯಲ್ಲಿ ದೋಷಿ ಗಳೆಂದು ಹೇಳಲು ಸಾಧ್ಯವಿಲ್ಲ’’ಎಂದು ಸಿಬಿಐ ತನಿಖೆಯನ್ನು ಎತ್ತಿಹಿಡಿದು ಜುಲೈ 31ರ ಆದೇಶದಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ.
ಸೆಂಗರ್ ಹಾಗೂ ಆತನ ಸಹಚರರ ವಿರುದ್ಧ ಕ್ರಿಮಿನಲ್ ಬೆದರಿಕೆಯ ಆರೋಪಗಳನ್ನು ಹೊರಿಸುವುದರ ಜೊತೆಗೆ, ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಹಾಗೂ ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಕೃತ್ಯವನ್ನು ಮಾಡಿದ್ದಕ್ಕಾಗಿ ಟ್ರಕ್ ಚಾಲಕನ ವಿರುದ್ಧ ಸೆಷನ್ಸ್ ನ್ಯಾಯಾಧೀಶರು ಆರೋಪಗಳನ್ನು ಹೊರಿಸಿದ್ದಾರೆ.