ಜಾಲ್ಸೂರು: ಮರದ ದಿಮ್ಮಿ ಸಹಿತ 8 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2021-08-02 09:59 GMT

ಪುತ್ತೂರು, ಆ.2: ಅಕ್ರಮ ಮರದ ದಿಮ್ಮಿ ಸಾಗಾಟ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಪುತ್ತೂರು ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಮರದ ದಿಮ್ಮಿ, ಒಂದು ಲಾರಿ, ಒಂದು ಬೈಕ್ ಸಹಿತ ರೂ. 8 ಲಕ್ಷ ಮೌಲ್ಯದ ಸೊತ್ತುಗಳನ್ನು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಲಾರಿಯೊಂದರಲ್ಲಿ ಕಿರಾಲ್ ಬೋಗಿ ಜಾತಿಗೆ ಸೇರಿದ 9 ಮರದ ದಿಮ್ಮಿಯನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಹಾಗೂ ಬೆಂಗಾವಲಾಗಿ ಬೈಕ್‌ನಲ್ಲಿ ಸಾಗುತ್ತಿದ್ದ ಪ್ರಕರಣವನ್ನು ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ಪತ್ತೆ ಹಚ್ಚಿದ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಸೊತ್ತುಗಳನ್ನು ಅಮಾನತುಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆ ವೇಳೆಗೆ ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.

ಖಚಿತ ವರ್ತಮಾನದ ಮೇರೆಗೆ ಅರಣ್ಯ ಇಲಾಖೆಯ ಪುತ್ತೂರು ವಲಯದ ಜಾಲ್ಸೂರು ಶಾಖೆಯ ಉಪವಲಯದ ಜಾಲ್ಸೂರು ಶಾಖೆಯ ಅರಣ್ಯ ಅಧಿಕಾರಿ ಸಂಜಯ್ ಎಚ್. ನಾಯ್ಕ್, ಕಾಳ ಭೈರವ ಗಸ್ತು ತಂಡದ ಉಪವಲಯ ಅರಣ್ಯಾಧಿಕಾರಿ ಮೆಹಬೂಬ ಸಾಬ, ಅರಣ್ಯ ರಕ್ಷಕರಾದ ಉದಯ ಕುಮಾರ್, ನಿಂಗರಾಜ ಕಣ್ಣೂರ, ರಾಜುಚಂದ್ರ ಎ.ಪಿ., ಅರಣ್ಯ ವೀಕ್ಷರಾದ ನವೀಣ್ ಎಂ. ಮತ್ತು ದೀಪಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಂಗಳೂರು ವಿಭಾಗದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್ ವೈ. ಮಾರ್ಗದರ್ಶನದಲ್ಲಿ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪರ ನಿರ್ದೇಶನದಲ್ಲಿ ಪುತ್ತೂರು ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News