ಆಹಾರ ಕಿಟ್ಟ್ ವಿತರಣೆಯಲ್ಲಿ ಭ್ರಷ್ಟಾಚಾರ : ಶುಭದ ರಾವ್ ಆರೋಪ

Update: 2021-08-03 09:43 GMT

ಕಾರ್ಕಳ: ಕಳೆದ ವರ್ಷ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ನೆರವಾಗಲೆಂದು ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಕಳ ತಾಲೂಕಿಗೆ ಬಿಡುಗಡೆಯಾಗಿದ್ದ ‌45 ಲಕ್ಷ ರೂಪಾಯಿಯ 5000 ಕಿಟ್ಟಗಳಲ್ಲಿ ಒಂದನ್ನೂ ವಿತರಿಸದೆ ಶಾಸಕ ಸುನೀಲ್ ಕುಮಾರ್  ಮತ್ತು ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿ ಹೋರಾಟ ಮಾಡಿದ್ದರ ಫಲವಾಗಿ ಈ ಬಾರಿ ಬಿಡುಗಡೆಯಾಗಿದ್ದ ಆಹಾರ ಕಿಟ್ಟನ್ನು ಸರಕಾರದ ಆದೇಶದಂತೆ ಪ್ರತೀ ಗ್ರಾಮ ಪಂಚಾಯತ್ ಮತ್ತು ಪುರಸಭೆಯ ಮೂಲಕ ಫಲಾನುಭವಿಗಳ ಪಟ್ಟಿ ‌ತಯಾರಿಸಿ‌ ಅವರ ನೇತೃತ್ವದಲ್ಲಿಯೇ  ವಿತರಿಸಲಾಗಿದೆ.

ಇದರಿಂದಾಗಿ ಯಾರಿಗೆ  ಕಿಟ್ಟ್ ಸಲ್ಲಬೇಕಿತ್ತೊ‌ ಅವರಿಗೆ ಸಲ್ಲಿಸಿದೇವೆ ಎಂಬ ತೃಪ್ತಿ ನಮಗಿದೆ. ಆದರೆ  ಕಳೆದ‌ ವರ್ಷ ಇದೇ ರೀತಿಯಲ್ಲಿ ಕಿಟ್ಟ್  ವಿತರಿಸಬೇಕು ಎಂಬ ತಮ್ಮದೇ ಸರಕಾರದ ಆದೇಶವಿದ್ದರೂ ಯಾಕೆ ವಿತರಿಸಲಿಲ್ಲ ? ಮತ್ತು ಯಾವುದೇ ಕಿಟ್ಟ್ ವಿತರಿಸದಯೇ ಸರಕಾರಕ್ಕೆ ಬೋಗಸ್ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸಿರುವುದು ತಾವು ಭ್ರಷ್ಟಾಚಾರ ನಡೆಸಿದ್ದೀರಿ ಎನ್ನುವ ಆರೋಪ ಸಾಬೀತಾಗಿದೆ ಎನ್ನುವುದಕ್ಕೆ ಇದು  ಪುರಾವೆಯಲ್ಲವೇ‌ ಎನ್ನುವ ಪ್ರಶ್ನೆಗೆ ಉತ್ತರಿಸಬೇಕು ಎಂದು  ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್‌ ಒತ್ತಾಯಿಸಿದರು.

ಇವರು ಕಾರ್ಕಳ ಪ್ರಕಾಶ್ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಕಳೆದ ವರ್ಷ ಶಾಸಕರು‌ ವಿತರಿಸಿದ್ದಾರೆ ಎನ್ನಲಾದ 5000 ಫಲಾನುಭವಿಗಳ ‌ಪಟ್ಟಿಯಲ್ಲಿ ಹೆಸರಿರುವ ಒಬ್ಬನೇ ಒಬ್ಬ ವ್ಯಕ್ತಿ  ಈ ರೀತಿಯ ಸರ್ಕಾರ ನಿರ್ದೇಶನದ ರೀತಿಯ ಕಾರ್ಮಿಕ ಇಲಾಖೆಯ ಸ್ಟಿಕರ್ ಅಂಟಿಸಿದ ರಟ್ಟಿನ ಬಾಕ್ಸಿನಲ್ಲಿರುವ 13 ಆಹಾರ ಪದಾರ್ಥಗಳ ಕಿಟ್ಟ್ ನಾನು ಪಡೆದಿದ್ದೇನೆ‌ ಎಂದು ಸತ್ಯ ನುಡಿದರೆ ಅವರಿಗೆ 25 ಸಾವಿರ ರೂಪಾಯಿಗಳ ಬಹುಮಾನವನ್ನು ನೀಡಲಾಗುವುದು,  ಅಥವಾ ಅಂದಿನ ಪಂಚಾಯತ್ ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಧಿಕಾರಿಗಳು ಯಾರೇ ಅದರೂ ಕಳೆದ ವರ್ಷ ಇದೇ ರೀತಿಯ ಕಿಟ್ಟನ್ನು ವಿತರಿಸಿದ್ದೇವೆ ಎಂದು ಸತ್ಯ ನುಡಿದರೆ ಅವರಿಗೂ 25 ಸಾವಿರ ರೂಪಾಯಿ ಬಹುಮಾನವನ್ನು ನೀಡಲಾಗುವುದು ಇಲ್ಲವಾದರೆ ಶಾಸಕರು ಮತ್ತು ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು ಸತ್ಯ ಎಂದು ಸಾಬೀತಾದಂತೆ.  ಕೋವಿಡ್  ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲೆಂದು ಕೆಲ ದಾನಿಗಳು ನೀಡಿದ ಹಣದಲ್ಲಿ ಚಿನ್ನದ ಕೆಲಸಗಾರರು, ಕ್ಷೌರಿಕರು, ಲಾಂಡ್ರಿ ಕಾರ್ಮಿಕರು,ಆಟೋರಿಕ್ಷಾ ಚಾಲಕರು, ಬಸ್ಸ್ ಸಿಬಂದಿಗಳು, ಕಾರು ಚಾಲಕರು ಮೊದಲಾದ ಕಾರ್ಮಿಕರಿಗೆ ಕೇವಲ  300/ ರೂ ಕಿಟ್ಟನ್ನು ವಿತರಿಸಿ ಅದನ್ನೇ ಕಾರ್ಮಿಕ ಇಲಾಖೆಯ 899/ ರೂ ಕಿಟ್ಟ್ ಎಂದು ನಂಬಿಸಿ ಸರಕಾರಕ್ಕೆ ಬೋಗಸ್ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸಿ ಸರಕಾರಕ್ಕೆ ಮತ್ತು ಕ್ಷೇತ್ರದ ಜನತೆಗೆ ದ್ರೋಹ ಬಗೆಯಲಾಗಿದೆ. ಹಸಿದ ಹೊಟ್ಟೆಗೆ ತಿನ್ನಲು ನೀಡಿದ ಆಹಾರ ಹಣವನ್ನು ‌ಲೂಟಿ ಮಾಡಿ‌ ಬಡವರನ್ನು ವಂಚಿಸಲಾಗಿದೆ. ಇಂತವರನ್ನು ದೇವರೂ ಕ್ಷಮಿಸಲಾರ, ಲೋಕಾಯುಕ್ತ ತನಿಖೆಯ ಮೇಲೆ ಭರವಸೆ ಇದೆ, ಲೋಕಕ್ಕೆ ಸತ್ಯ ‌ತಿಳಿಯುವುದು ಎಂಬ ನಂಬಿಕೆ ಇದೆ ಎಂದರು.

ಈ ಸಂಧರ್ಭದಲ್ಲಿ ಮಾಳ ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ಹೆಗ್ಡೆ, ಯುವ ಕಾಂಗ್ರೆಸ್ ಕಾರ್ಕಳ ಅಧ್ಯಕ್ಷ ಯೋಗಿಶ್ ನಯನ್ ಇನ್ನಾ ,ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News