ಕುಂದಾಪುರ: ಬಸ್ ಪ್ರಯಾಣ ದರ ಏರಿಕೆ ಹಿಂತೆಗೆದುಕೊಳ್ಳಲು ಸಿಪಿಎಂ ಆಗ್ರಹ
ಕುಂದಾಪುರ, ಆ.3: ಕಳೆದ ಒಂದು ವರ್ಷದಿಂದ ಕೊರೋನಾದಿಂದಾಗಿ ಸಂಕಷ್ಟಕ್ಕೆ ಒಳಗಾದ ಜನಸಾಮಾನ್ಯರ ಮೇಲೆ ಬಸ್ ಪ್ರಯಾಣದರ ಹೆಚ್ಚು ಮಾಡಿ ಗಾಯದ ಮೇಲೆ ಬರೆ ಹಾಕಿದಂತಾಗಿದೆ ಎಂದು ಸಿಪಿಐಎಂ ಕುಂದಾಪುರ ವಲಯ ಸಮಿತಿ ಆರೋಪಿಸಿದೆ.
ಇತ್ತೀಚಿನ ದಿನಗಳಲ್ಲಿ ವಿದ್ಯುತ್ದರ ಹೆಚ್ಚಳ, ಜೀವನಾವಶ್ಯಕ ವಸ್ತುಗಳ ಬೆಲೆಗಳು/ಹೆಚ್ಚಾಗಿ ಕಾರ್ಮಿಕ, ರೈತ ಮತ್ತು ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಅತೀ ಸಂಕಷ್ಟದ ಕಾಲಘಟ್ಟದಲ್ಲಿ ಬಸ್ ಪ್ರಯಾಣದರ ಕೂಡಾ ಹೆಚ್ಚು ಮಾಡಿ ಜನ ಸಾಮಾನ್ಯರ ಮೇಲೆ ಹೊರೆ ಹೊರಿಸಲು ಬಸ್ ಮಾಲಕರ ವರ್ಗದವರು ಅಧಿಕಾರಿಗಳ ಅನುಮತಿ ಇಲ್ಲದೇ ಶೇ.15ರಿಂದ20ರ ವರೆಗೆ ಹೆಚ್ಚು ಮಾಡಿರುವುದು ತೀರಾ ಜನ ವಿರೋಧಿ ಕ್ರವುವಾಗಿದೆ ಎಂದು ಅವರು ದೂರಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚು ಮಾಡಿದ ಸರಕಾರದ ವಿರುದ್ದ ಪ್ರತಿಭಟಿಸುವುದನ್ನು ಬಿಟ್ಟು ಜನಸಾಮಾನ್ಯರ ಮೇಲೆ ಹೊರೆ ಹಾಕಿದ್ದು ಸರಿಯಲ್ಲ. ಕೂಡಲೆ ಹೆಚ್ಚಿಸಿರುವ ಬಸ್ ಪ್ರಯಾಣ ದರವನ್ನು ಹಿಂತೆಗೆದುಕೊಳ್ಳಬೇಕೆಂದು ಕುಂದಾಪುರ ವಲಯ ಸಮಿತಿಯ ಕಾರ್ಯದರ್ಶಿ ಎಚ್.ನರಸಿಂಹ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.