ಉಳ್ಳಾಲದಲ್ಲಿ ಎನ್‌ಐಎ ತಂಡದಿಂದ ದಾಳಿ: ವಿಚಾರಣೆಯ ಬಳಿಕ ಓರ್ವ ವಶಕ್ಕೆ

Update: 2021-08-04 17:29 GMT

ಮಂಗಳೂರು, ಆ. 4: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡವೊಂದು ನಗರದ ಹೊರವಲಯದ ಉಳ್ಳಾಲದ ನಿವಾಸಕ್ಕೆ ದಾಳಿ ನಡೆಸಿ, ಇಡೀ ದಿನದ ವಿಚಾರಣೆಯ ಬಳಿಕ ಓರ್ವನನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಬುಧವಾರ ನಡೆದಿದೆ.

ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿಯಾಗಿರುವ ಬಿ. ಎಂ. ಬಾಷಾ ಅವರ ನಿವಾಸಕ್ಕೆ ಎನ್‌ಐಎ ತಂಡ ಮುಂಜಾನೆ 5.30ಕ್ಕೆ ಭೇಟಿ ನೀಡಿ, ಸಂಜೆಯವರೆಗೆ ವಿಚಾರಣೆ ನಡೆಸಿದೆ. ಬಳಿಕ ಸಂಜೆ ಬಾಷಾ ಅವರ ಕಿರಿಯ ಪುತ್ರ ಅಮ್ಮಾರ್ ಎಂಬಾತನನ್ನು ಹೆಚ್ಚಿನ ವಿಚಾರಣೆಗೆಂದು ವಶಕ್ಕೆ ಪಡೆದುಕೊಂಡಿದೆ.

ಆತನನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಬೆಂಗಳೂರು ಅಥವಾ ದಿಲ್ಲಿಗೆ ಕರೆದೊಯ್ಯಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ ಎನ್‌ಐಎ ಅಥವಾ ಸ್ಥಳೀಯ ಪೊಲೀಸರು ಯಾವುದೇ ಅಧಿಕೃತ ಪ್ರಕಟಣೆ ಅಥವಾ ಹೇಳಿಕೆಗಳನ್ನು ಈವರೆಗೆ ನೀಡಿಲ್ಲ.

ತನಿಖೆಗೆ ಸಂಪೂರ್ಣ ಸಹಕಾರ: ಕುಟುಂಬ

‘‘ಇಂದು ಮುಂಜಾನೆ ಸುಮಾರು 5.30ರ ಹೊತ್ತಿಗೆ 30ಕ್ಕೂ ಅಧಿಕವಿದ್ದ ತನಿಖಾ ತಂಡ ನನ್ನ ಮನೆಗೆ ಆಗಮಿಸಿತ್ತು. ಸುಮಾರು ನಾಲ್ಕು ವರ್ಷದ ಹಿಂದೆ ಹಠಾತ್ತನೆ ನಾಪತ್ತೆಯಾಗಿದ್ದ ನನ್ನ ಮೊಮ್ಮಗಳು ಮತ್ತು ಆಕೆಯ ಪತಿಗೆ ಸಂಬಂಧಿಸಿ ವಿಚಾರಣೆ ನಡೆಸುವುದಕ್ಕಿದೆ ಎಂದು ತನಿಖಾಧಿಕಾರಿಗಳು ತಿಳಿಸಿದರು. ಈ ಹಿನ್ನೆಲೆಯಲ್ಲಿ ನಾನು ಅವರು ಕೇಳಿದ ಪ್ರಶ್ನೆಗಳಿಗೆ ನನಗೆ ಗೊತ್ತಿರುವ ಎಲ್ಲ ಮಾಹಿತಿಗಳನ್ನು ನೀಡಿದ್ದೇನೆ’’ ಎಂದು ಕುಟುಂಬದ ಹಿರಿಯರಾಗಿರುವ ಅಬ್ದುರ್ರಹ್ಮಾನ್ ಬಾಷಾ ಅವರು ವಾರ್ತಾಭಾರತಿಗೆ ತಿಳಿಸಿದ್ದಾರೆ.

‘‘ಬೆಳಗ್ಗೆಯಿಂದ ಸಂಜೆಯವರೆಗೂ ನಮ್ಮ ಮನೆಯಲ್ಲೇ ಇದ್ದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಮೊಬೈಲ್‌ಗಳನ್ನು ತಪಾಸಣೆ ನಡೆಸಿ, ಕೆಲವು ವೀಡಿಯೋಗಳ ಬಗ್ಗೆ ಪ್ರಶ್ನಿಸಿದ್ದರು. ಅವುಗಳ ಕುರಿತಂತೆಯೂ ನಾವು ಉತ್ತರಗಳನ್ನು ನೀಡಿದ್ದು, ಅವರ ಅನುಮಾನಗಳನ್ನು ಪರಿಹರಿಸಿದ್ದೇವೆ’’ ಎಂದು ಅವರು ಹೇಳಿದ್ದಾರೆ.

‘‘ಇದೇ ಸಂದರ್ಭದಲ್ಲಿ ನನ್ನ ಕಿರಿಯ ಪುತ್ರನ ಮೊಬೈಲ್‌ಗಳನ್ನು ಪರಿಶೀಲಿಸಿದ್ದು ಕೆಲವು ವೀಡಿಯೋಗಳ ಕುರಿತಂತೆ ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಆತನೂ ಉತ್ತರಿಸಿದ್ದಾನೆ. ಬಳಿಕ ‘ಈತನನ್ನು ನಾವು ನ್ಯಾಯಾಲಯಕ್ಕೆ ಹಾಜರು ಪಡಿಸಿ, ದಿಲ್ಲಿಗೆ ಕರೆದೊಯ್ದು ಹತ್ತು ದಿನಗಳ ‘ಕೌನ್ಸೆಲಿಂಗ್’ ನಡೆಸುತ್ತೇವೆ. ನಿರಪರಾಧಿ ಎಂದು ಕಂಡು ಬಂದರೆ ವಾಪಾಸ್ ಕಳುಹಿಸುತ್ತೇವೆ ಎಂದು ನಮಗೆ ತಿಳಿಸಿದರು’’ ಎಂದು ಅಬ್ದುರ್ರಹ್ಮಾನ್ ಅವರು ವಿವರಿಸಿದರು.

‘‘ನಮ್ಮ ದೇಶದ ಕಾನೂನು ವ್ಯವಸ್ಥೆಯ ಕುರಿತಂತೆ ನಮಗೂ, ನಮ್ಮ ಕುಟುಂಬಕ್ಕೂ ಅಪಾರ ಗೌರವ ಮತ್ತು ನಂಬಿಕೆಯಿದೆ. ಅದಕ್ಕೆ ಚ್ಯುತಿ ಬರದಂತೆ ಈವರೆಗೆ ಪಾಲಿಸಿಕೊಂಡು ಬಂದಿದ್ದೇವೆ. ಮುಂದೆಯೂ ಪಾಲಿಸಿಕೊಂಡು ಬರುತ್ತೇವೆ. ನನ್ನ ಮಗ ಶೀಘ್ರ ವಾಪಾಸ್ ಬರುತ್ತಾನೆ ಎನ್ನುವ ಪೂರ್ಣ ನಂಬಿಕೆ ನನಗಿದೆ’’ ಎಂದು ಅವರು ಹೇಳಿದ್ದಾರೆ.

ದೇಶಾದ್ಯಂತ ನಾಲ್ವರ ಬಂಧನ

ಬೆಂಗಳೂರು : ಸಾಮಾಜಿಕ ಮಾಧ್ಯಮಗಳಲ್ಲಿ ಇಸ್ಲಾಮಿಕ್ ಸ್ಟೇಟ್(ಐಸಿಸ್) ಪರ ಪ್ರಚಾರ ಅಭಿಯಾನದಲ್ಲಿ ತೊಡಗಿಕೊಂಡಿದ್ದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ತಿಳಿಸಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಲಾ ಓರ್ವರನ್ನು ಮಂಗಳೂರು ಮತ್ತು ಬೆಂಗಳೂರಿನಿಂದ ಮತ್ತು ಇತರ ಇಬ್ಬರನ್ನು ಜಮ್ಮು-ಕಾಶ್ಮೀರದ ಬಂಡಿಪೋರ ಮತ್ತು ಶ್ರೀನಗರದಿಂದ ಬಂಧಿಸಲಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News