×
Ad

ಉಡುಪಿ: ​ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಅಭಿಯಾನ

Update: 2021-08-07 20:36 IST

ಉಡುಪಿ, ಆ.7: ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ-2021 ಅಭಿಯಾನಆ.15ರವರೆಗೆ ನಡೆಯಲಿದ್ದು, ಜಿಪಂ ಉಡುಪಿ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಜೀವವೈವಿಧ್ಯತೆ ದಿನಾಚರಣೆ-2021ರ ಅಭಿಯಾನ ಕಾರ್ಯಕ್ರಮ ಮಣಿಪಾಲದ ಬಡಗುಬೆಟ್ಟು ಸಾಲುಮರದ ತಿಮ್ಮಕ್ಕ ವೃಕ್ಷ ಉದಾ್ಯನವನದಲ್ಲಿ ಶುಕ್ರವಾರ ಜರುಗಿತು.

ಪ್ರಕೃತಿಗೆ ಒದಗಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ಕೂಡ ಪಾಲುದಾರ ರಾಗಿದ್ದೇವೆ ಎಂಬ ಧ್ಯೆಯವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಿಕ್ಕ ಪುಟ್ಟ ಕೀಟದಿಂದ ಹಿಡಿದು ದೊಡ್ಡ ಪ್ರಾಣಿಯವರೆಗೆ ಎಲ್ಲರೂ ಒಟ್ಟು ಸಹಬಾಳ್ವೆಯಿಂದ ಬದುಕುವುದೇ ಜೀವವೈವಿಧ್ಯತೆ. ಈ ನಿಟ್ಟಿನಲ್ಲಿ ಜೀವವೈವಿಧ್ಯತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಕುಂದಾಪುರ ವಲಯದ ಉಪ ಅರಣ್ಯಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಮಾತನಾಡಿ, ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯಪ್ರಭೇದಗಳನ್ನು ರಕ್ಷಿಸಿ, ಜೀವವೈವಿಧ್ಯತೆಯನ್ನು ಮುಂದಿನ ಪೀಳಿಗೆಯವರೆಗೆ ಉಳಿಸಿಕೊಂಡು ಸಂರಕ್ಷಿಸಬೇಕಾಗಿದೆ. ಹಾಗೂ ಸಾವಿರಾರು ಜೀವತಳಿಗಳು ನಾಶದ ಅಂಚಿನಲ್ಲಿವೆ. ಇವುಗಳನ್ನು ಉಳಿಸುವ ದೃಷ್ಟಿಯಿಂದ ನಾವು ಕಾರ್ಯ ಪ್ರವೃತ್ತರಾಗಬೇಕು. ಪ್ರಕೃತಿ ಸಮತೋಲನಕ್ಕೆ ಎಲ್ಲಾ ಜೀವರಾಶಿಗಳ ರಕ್ಷಣೆ ಅಗತ್ಯ. ಪ್ರಕೃತಿ ಮನುಷ್ಯನಿಗೆ ಅತ್ಯಮೂಲ್ಯವಾದ ವರದಾನಗಳನ್ನು ನೀಡಿದೆ ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ( ಪ್ರಭಾರ ) ಪ್ರಶಾಂತ್ ಮಾತನಾಡಿ, ಪ್ರಕೃತಿ ಎಲ್ಲರಿಗೂ ಬೇಕು. ಗಾಳಿ ಎಲ್ಲರಿಗೂ ಬೇಕು. ಆದರೆ ಪೋಷಣೆ ಯಾರಿಗೂ ಬೇಡ. ಈ ಜಗತ್ತಿನ ಸೌಂದರ್ಯ ಅಡಗಿರುವುದೇ ಜೀವವೈವಿಧ್ಯಗಳಿಂದಾಗಿ. ಪಶ್ಚಿಮಘಟ್ಟ ಗಳು ಜೀವವೈವಿಧ್ಯತೆ ತಾಣ. ವಿಶ್ವದ ಅತ್ಯಂತ ಶಿಷ್ಟವಾದ ಜೀವರಾಶಿಗಳು ಇಲ್ಲಿ ಕಾಣ ಸಿಗುತ್ತವೆ. ಸ್ಥಾನಿಕವಾಗಿ ಜಿಲ್ಲಾ, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ನಿಸರ್ಗ ಸಂಪತ್ತಿನ ಪರಿಸ್ಥಿತಿಯ ಅವಲೋಕನವಾಗಬೇಕು. ಕೆರೆಗಳ ಪುನಶ್ಚೇತನ, ವನಗಳ ಪುನಶ್ಚೇತನ ಕಾರ್ಯಗಳಲ್ಲಿ ಜನತೆ ಪಾಲ್ಗೊಳ್ಳಬೇಕು ಎಂಬ ಉದ್ದೇಶ ದಿಂದ ಜೀವವೈವಿಧ್ಯತೆ ಜಾಗೃತಿ ಅಭಿಯಾನವನ್ನು ಸರಕಾರದ ವತಿಯಿಂದ ರೂಪಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಹಾಗೂ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಡಾ.ಎನ್.ಎ.ಮಧ್ಯಸ್ಥ ಮತ್ತು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಬಿ.ಧನಂಜಯ ಉಪಸ್ಥಿತರಿದ್ದರು.

ಜೀವವೈವಿಧ್ಯತೆ ಕ್ಷೇತ್ರದಲ್ಲಿ ಜಿಲ್ಲೆ/ತಾಲೂಕಿನಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಔಷಧೀಯ ಸಸ್ಯಗಳಲ್ಲಿ ಉತ್ತಮ ಜ್ಞಾನವುಳ್ಳ ಆರೂರು ಮಂಜುನಾಥ, ಮನೆಮದ್ದು/ ನಾಟಿವೈದ್ಯೆ ಕಿಟ್ಟಿಪೂಜಾರ್ತಿ ಇವರನ್ನು ಸನ್ಮಾನಿಸಲಾಯಿತು.

ಬಡಗಬೆಟ್ಟು ಗ್ರಾಪಂ ಅಧ್ಯಕ್ಷ ಮಾಧವ ಆಚಾರ್ಯ, ಜಿಲ್ಲಾ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರು, ಜಿಲ್ಲಾಮಟ್ಟದ ತಾಂತ್ರಿ ಪರಿಣಿತ ಸಮಿತಿಯ ಸದಸ್ಯರು, ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಜನಪ್ರತಿನಿಧಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉಡುಪಿ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ರವೀಂದ್ರ ಪಿ. ಆಚಾರ್ಯ ಸ್ವಾಗತಿಸಿದರು. ಕುಂದಾಪುರ ವಲಯ ಸಾಮಾಜಿಕ ಅರಣ್ಯದ ವಲಯ ಅರಣ್ಯಾಧಿಕಾರಿ ತುಳಸಿ ವಂದಿಸಿದರು. ಕುಂದಾಪುರ ಉಪವಲಯ ಅರಣ್ಯಾಧಿಕಾರಿ ಸಂಗೀತಾ ಶೆಡ್ತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News