ಆ.18-20: ಐಸಿಎಐ ‘ಸ್ವರ್ಣ ಪರ್ವ’ ರಾಷ್ಟ್ರೀಯ ಸಮ್ಮೇಳನ
ಮಂಗಳೂರು, ಆ.12: ಭಾರತೀಯ ಲೆಕ್ಕ ಪರಿಶೋಧಕರ ಸಂಘ (ಐಸಿಎಐ) ಮಂಗಳೂರು ಶಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ‘ಸ್ವರ್ಣ ಪರ್ವ’ ರಾಷ್ಟ್ರೀಯ ಸಮ್ಮೇಳನ ಆ.18ರಿಂದ 20ರ ತನಕ ಫಿಜಿಟಲ್ ಮೂಲಕ ಆಯೋಜಿಸಲಾಗಿದೆ ಎಂದು ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ಕಾಮತ್ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದ ಅರುಣ್ ಸಿಂಗ್ ಸಮ್ಮೇಳನ ಉದ್ಘಾಟಿಸುವರು. ಐಸಿಎಐ ಅಧ್ಯಕ್ಷ ನಿಹಾರ್ ಎನ್. ಜಂಬೂಸಾರಿಯಾ ಮತ್ತು ರಾಂಡ್ಸ್ಟಾಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್ ಪಿ.ಎಸ್. ಗೌರವ ಅತಿಥಿಗಳಾಗಿ ಭಾಗವಹಿಸುವರು. ಸಿಸಿಎಂ ಅಧ್ಯಕ್ಷ ಸಿಎಂಪಿ ಐಸಿಎಐ ಡಾ.ಸಂಜೀವ್ ಕುಮಾರ್ ಸಿಂಘಾಲ್, ಸಿಸಿಎಂ ಉಪಾಧ್ಯಕ್ಷ ಸಿಎಂಪಿ ಐಸಿಎಐ ಪ್ರಸನ್ನ ಕುಮಾರ್,ಎಸ್ಐಆರ್ಸಿ ಅಧ್ಯಕ್ಷ ಜಲಪತಿ ಕೆ. ಭಾಗವಹಿಸಲಿದ್ದಾರೆ ಎಂದರು.
ಲೆಕ್ಕಪರಿಶೋಧಕರಾಗಿದ್ದುಕೊಂಡು ಇತರ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 12 ಮಂದಿ ಸಾಧಕರನ್ನು ಸುವರ್ಣ ಮಹೋತ್ಸವದ ಈ ಸಂದರ್ಭ ಸನ್ಮಾನಿಸಲಾಗುವುದು. ಲೆಕ್ಕಪರಿಶೋಧಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಒಟ್ಟು 6 ಟೆಕ್ನಿಕಲ್ ಸೆಷನ್ಸ್ಗಳು ನಡೆಯಲಿವೆ ಎಂದು ಐಸಿಎಐ ಮಂಗಳೂರು ಶಾಖೆ ನಿಕಟಪೂರ್ವ ಅಧ್ಯಕ್ಷ ಎಸ್.ಎಸ್.ನಾಯಕ್ ಹೇಳಿದರು.
ಐಸಿಎಐ ಮಂಗಳೂರು ಶಾಖೆ 1971ರ ಆ.18ರಂದು ಆರಂಭಗೊಂಡಿದ್ದು, ಶಾಖೆಯ ವ್ಯಾಪ್ತಿ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿದೆ. ಸುಮಾರು 850ಕ್ಕೂ ಅಧಿಕ ಸದಸ್ಯರು ಮತ್ತು 3800ಕ್ಕಿಂತಲೂ ಅಧಿಕ ಸಿಎ ವಿದ್ಯಾರ್ಥಿಗಳು ಶಾಖೆಯಲ್ಲಿ ನೊಂದಾಯಿಸಿಕೊಂಡಿದ್ದಾರೆ. ಮಂಗಳೂರು ಶಾಖೆಯು ಸಂಸ್ಥೆಯ ಉತ್ತಮ ಶಾಖೆಗಳಲ್ಲಿ ಗುರುತಿಸಿಕೊಂಡಿದೆ. ಸದಸ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸಮ್ಮೇಳನ, ಕಾರ್ಯಾಗಾರಗಳನ್ನು ಹಮ್ಮಿಕೊಂಡು ವಿಶಿಷ್ಟ ಛಾಪನ್ನು ಮೂಡಿಸಿದೆ. ತನ್ನದೇ ಆದ ವಿಶಾಲ ಕ್ಯಾಂಪಸ್, ಹವಾನಿಯಂತ್ರಿತ ಅಡಿಟೋರಿಯಂ, ಕಂಪ್ಯೂಟರ್ ಲ್ಯಾಬ್, ತರಗತಿ ಕೊಠಡಿಗಳು, ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಓದುವ ಕೊಠಡಿ, ಬೋರ್ಡ್ ರೂಂ ಮತ್ತು ಇತ ಸೌಲಭ್ಯಗಳನ್ನು ಪಡೀಲ್ನಲ್ಲಿರುವ ಐಸಿಎಐ ಭವನದಲ್ಲಿ ಹೊಂದಿದೆ ಎಂದು ಮಾಜಿ ಅಧ್ಯಕ್ಷ ಎಂ.ಎನ್.ಪೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಐಸಿಎಐ ಮಂಗಳೂರು ಶಾಖೆಯ ಕಾರ್ಯದರ್ಶಿ ಪ್ರಸನ್ನ ಶೆಣೈ ಎಂ., ಖಜಾಂಚಿ ಗೌತಮ್ ನಾಯಕ್ ಎಂ. ಉಪಸ್ಥಿತರಿದ್ದರು.