ಮೆಗಾ ಲೋಕ್ ಅದಾಲತ್ : ಒಂದೇ ದಿನದಲ್ಲಿ ಒಟ್ಟು 3244 ಪ್ರಕರಣ ಇತ್ಯರ್ಥ
ಉಡುಪಿ, ಆ.14: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ಶನಿವಾರ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ಅದಾಲತನ್ನು ಆಯೋಜಿಸಿ ಒಂದೇ ದಿನ ಒಟ್ಟು 3244 ಪ್ರಕರಣ ಗಳನ್ನು ರಾಜೀ ಮೂಲಕ ಇತ್ಯರ್ಥ ಪಡಿಸಲಾಯಿತು. ಅಲ್ಲದೇ ಒಟ್ಟು 8,11,35,240ರೂ.ಗಳ ಪರಿಹಾರ ಮೊತ್ತವನ್ನು ಘೋಷಿಸಲಾಯಿತು.
ಒಟ್ಟು ಪ್ರಕರಣಗಳಲ್ಲಿ 3065 ಪ್ರಕರಣಗಳನ್ನು (ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ-54, ಚೆಕ್ಕು ಅಮಾನ್ಯ ಪ್ರಕರಣ-134, ಬ್ಯಾಂಕ್/ ಹಣ ವಸೂಲಾತಿ ಪ್ರಕರಣ-22, ಎಂವಿಸಿಪ್ರಕರಣ-155, ಕಾರ್ಮಿಕ ವಿವಾದ-2 ಎಂಎಂಆರ್ಡಿ ಆಕ್ಟ್ ಪ್ರಕರಣ-21, ವೈವಾಹಿಕ ಪ್ರಕರಣ-3, ಭೂಸ್ವಾಧೀನ ಪ್ರಕರಣ-1, ಸಿವಿಲ್ ಪ್ರಕರಣ-158, ಇತರೇ ಕ್ರಿಮಿನಲ್ ಪ್ರಕರಣ-2515) ಹಾಗೂ ವ್ಯಾಜ್ಯ ಪೂರ್ವ ದಾವೆ-179 ಇವುಗಳನ್ನು ರಾಜೀ ಮುಖಾಂತರ ಇತ್ಯರ್ಥ ಪಡಿಸಲಾಯಿತು.
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಕಕ್ಷಿಗಾರರು ಹಾಗೂ ಇತರ ಸರಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್ನ್ನು ಯಶಸ್ವಿಗೊಳಿಸಲಾಯಿತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.