ಮೂಡುಬಿದಿರೆಯಲ್ಲಿ ಕಾಡು ಪ್ರಾಣಿ ಬೇಟೆ ಪ್ರಕರಣ: 12 ಮಂದಿ ಸೆರೆ
ಮಂಗಳೂರು, ಆ.16: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಕೊಡ್ಯಡ್ಕ ಗುಡ್ಡೆಯಂಗಡಿ ಮೆನೇಜಸ್ ಕಂಪೌಂಡ್ನ ಜಾನ್ ಸಿ.ಮೆನೇಜಸ್ ಎಂಬವರ ಮನೆ ಹಿಂಬದಿಯಲ್ಲಿ ಬೇಟೆಯಾಡಿ ಕಾಡು ಹಂದಿಯನ್ನು ಮಾಂಸ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಿದ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.
ಮೂಡುಬಿದಿರೆ ತಾಲೂಕು ಮಿತ್ತಬೈಲು ನಿವಾಸಿ ಜಾನ್ ಸಿ.ಮೆನೇಜಸ್, ಕಲ್ಲಮುಂಡ್ಕೂರು ಗ್ರಾಮದ ನಿವಾಸಿಗಳಾದ ಶ್ರೀನಿವಾಸ, ಗುರುಪ್ರಸಾದ್, ಅಜೇಯ್, ಸನತ್, ಗಣೇಶ್ ಬೆಳುವಾಯಿ ಗ್ರಾಮದ ಜೋಯೆಲ್ ಅನಿಲ್ ಡಿಸೋಜ, ಪಾಲಡ್ಕ ಗ್ರಾಮದ ಹರೀಶ್ ಪೂಜಾರಿ, ನೋಣಯ್ಯ, ಕಡಂದಲೆ ಗ್ರಾಮದ ಮೋಹನ್ ಗೌಡ, ರಮೇಶ್, ಕಾರ್ಕಳ ತಾಲೂಕು ಬೋಳ ಗ್ರಾಮದ ವಿನಯ್ ಪೂಜಾರಿ ಬಂಧಿತರು.
ಖಚಿತ ಮಾಹಿತಿ ಮೇರೆಗೆ ರವಿವಾರ ತಡರಾತ್ರಿ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿದ್ದಾರೆ. ಸಂರಕ್ಷಿತ ಅರಣ್ಯಕ್ಕೆ ಹೋಗಿ ಹಂದಿ ಬೇಟೆಯಾಡಿ ತಂದಿದ್ದರು. ಆರೋಪಿಗಳಿಂದ ಕೊಲ್ಲಲ್ಪಟ್ಟ ಎರಡು ಕಾಡು ಹಂದಿ, ನಾಲ್ಕು ಸಿಂಗಲ್ ಬ್ಯಾರೆಲ್ ರೈಫಲ್, ಎರಡು ಬಂದೂಕಿನ ತೋಟೆ, ಹಂದಿ ಹಿಡಿಯಲು ಉಪಯೋಗಿಸಿದ ನಾಲ್ಕು ಬಲೆ, ಕಬ್ಬಿಣದ ಬರ್ಚಿ, ಗ್ಯಾಸ್ ಸಿಲಿಂಡರ್ ಮತ್ತು ಎರಡು ಓಮಿನಿ ಕಾರು, 12 ಮೊಬೈಲ್ ಫೋನ್ಗಳು ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಪರವಾನಿಗೆಯ ಬಂದೂಕು ದುಷ್ಕೃತ್ಯಕ್ಕೆ ಬಳಕೆ: ಕೃಷಿ ನಾಶಗೊಳಿಸುವ ಕಾಡು ಪ್ರಾಣಿಗಳನ್ನು ಓಡಿಸಲು ಬಂದೂಕು ಪರವಾನಿಗೆ ಪಡೆದು ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ಹಂದಿ ಬೇಟೆ ಈ ತಂಡದ ಪ್ರಮುಖ ಉದ್ದೇಶವಾಗಿದ್ದು, ಬೇಟೆಗೆ ಹೋಗಿದ್ದಾಗ ಸಿಗುವ ಇತರ ಪ್ರಾಣಿಗಳನ್ನು ಕೂಡ ಕೊಂದು ಮಾಂಸ ಮಾಡುತ್ತಿದ್ದರು. ಸ್ನೇಹಿತರ ತಂಡವಾಗಿದ್ದು, ಸ್ವಂತಕ್ಕಾಗಿ ಬೇಟೆಯಾಡಿ ಮಾಂಸ ಮಾಡುವುದು ಹಾಗೂ ಇತರರು ಕರೆದಾಗ ಹೋಗಿ ಬೇಟೆಯಾಗಿ ಕೊಡುತ್ತಿದ್ದರು. ತಂಡ ಹಿಂದೆಯೂ ಹಲವು ಬಾರಿ ಬೇಟೆಯಾಡಿರುವ ಇತಿಹಾಸವಿದೆ. ಮೂಡುಬಿದಿರೆ ಹಾಗೂ ಕಾರ್ಕಳ ತಾಲೂಕಿನಲ್ಲಿ ಇಂತಹ ಹಲವು ತಂಡಗಳಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ವಿಚಾರಣೆ ವೇಳೆ ಬೇಟೆಯಾಡುವುದರಲ್ಲಿ ತಪ್ಪೇನು, ಕಾಡು ಹಂದಿ ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಗಾಗಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದರೋಡೆ ಕುರಿತು ತನಿಖೆ: ತಂಡ ಮಾರಕ ಆಯುಧ ಹೊಂದಿರುವುದರಿಂದ ಮೂಡುಬಿದಿರೆ-ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ನಡೆದಿರುವ ಹೆದ್ದಾರಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆಯೇ ಎನ್ನುವ ನಿಟ್ಟಿನಲ್ಲೂ ವಿಚಾರಣೆ ನಡೆಸಲಾಗುವುದು. ಹೆದ್ದಾರಿ ದರೋಡೆ ಪ್ರಕರಣಗಳಲ್ಲಿ ಈಗಾಗಲೇ 20 ಮಂದಿಯನ್ನು ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.