ಆ.19ರಿಂದ ಸೆ.3ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ನಿಷೇಧಾಜ್ಞೆ
ಉಡುಪಿ, ಆ.17: 2021ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೊಂದಾಯಿಸಿಕೊಂಡಿರುವ ಖಾಸಗಿ ಅಭ್ಯರ್ಥಿಗಳಿಗೆ ಮತ್ತು ಜುಲೈ 20ರಂದು ಪ್ರಕಟಗೊಂಡ ಫಲಿತಾಂಶವನ್ನು ತಿರಸ್ಕರಿಸಿ, ಮತ್ತೆ ಲಿಖಿತ ಪರೀಕ್ಷೆಗೆ ಹಾಜರಾಗ ಬಯಸುವ ವಿದ್ಯಾರ್ಥಿಗಳಿಗೆ ಆಗಸ್ಟ್ 19ರಿಂದ ಸೆಪ್ಟಂಬರ್ 3ರವರೆಗೆ ಲಿಖಿತ ಪರೀಕ್ಷೆಗಳು ನಡೆಯಲಿವೆ.
ಜಿಲ್ಲೆಯಲ್ಲಿ ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜು, ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200ಮೀ ವ್ಯಾಪ್ತಿಯಲ್ಲಿ ಸೆಕ್ಷನ್ 144ರಂತೆ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 299 ಮಂದಿ ಖಾಸಗಿ ವಿದ್ಯಾರ್ಥಿಗಳು ರೀಕ್ಷೆ ಬರೆಯಲಿದ್ದು, ಕೆಲವು ವಿಷಯಗಳಲ್ಲಿ ತಮಗೆ ನಿರೀಕ್ಷಿತ, ತೃಪ್ತಿಕರ ಮಾರ್ಕ್ ಬಾರದ ಕಾರಣ 9 ಮಂದಿ ವಿದ್ಯಾರ್ಥಿಗಳು ಈ ವಿಷಯದಲ್ಲಿ ಪುನ ಪರೀಕ್ಷೆಯನ್ನು ಬರೆಯಲಿದ್ದಾರೆ. ಇವರಲ್ಲಿ ಮೂವರು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದರೆ ಉಳಿದವರು ಕಾಮರ್ಸ್ ಹಾಗೂ ಆರ್ಟ್ಸ್ ವಿದ್ಯಾರ್ಥಿಗಳು ಎಂದು ಜಿಲ್ಲೆಯ ಪ.ಪೂ.ಇಲಾಖೆಯ ಮೂಲಗಳು ತಿಳಿಸಿವೆ.