ಭಟ್ಕಳ: ಚಿರತೆ ಮರಿ ಸಾವು; ಅರಣ್ಯಾಧಿಕಾರಿಗಳಿಂದ ಪರಿಶೀಲನೆ
Update: 2021-08-23 23:46 IST
ಭಟ್ಕಳ: ಇಲ್ಲಿನ ಮುಟ್ಟಳ್ಳಿಯ ತಲಾನ್ದಲ್ಲಿ ಚಿರತೆ ಮರಿಯೊಂದು ಸಾವನ್ನಪ್ಪಿರವ ಘಟನೆ ರವಿವಾರ ನಡೆದಿದೆ.
ತಲಾನ್ನ 193 ಸರ್ವೆ ನಂಬರಿನ ಹಿಡುವಳಿ ಜಾಗದಲ್ಲಿ ಚಿರತೆ ಮೃತಪಟ್ಟಿರುವ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ ನೇತೃತ್ವದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ರವಿವಾರ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಮೃತಪಟ್ಟಿರುವುದು ಹೆಣ್ಣು ಚಿರತೆ ಮರಿಯಾಗಿದ್ದು, ಸುಮಾರು ಒಂದೂವರೆ ವರ್ಷ ಪ್ರಾಯದ್ದಾಗಿದೆ. ಚಿರತೆಯ ಮೈಮೇಲೆ ಪರಚಿದ ಗಾಯಗಳಿದ್ದು, ಯಾವುದೇ ಗುಂಡು ತಗುಲಿದ ಗಾಯಗಳಿಲ್ಲ ಎನ್ನಲಾಗಿದೆ. ಚಿರತೆ ಅಥವಾ ಬೇರೆ ಯಾವುದೋ ಪ್ರಾಣಿಗಳೊಂದಿಗಿನ ಸೆಣಸಾಟದಲ್ಲಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.