ನೆಟ್ ವರ್ಕ್ ಸಮಸ್ಯೆ: ಆನ್ ಲೈನ್ ಕ್ಲಾಸ್ ಗಾಗಿ ಮರವೇರಿದ್ದ ವಿದ್ಯಾರ್ಥಿ ಬಿದ್ದು ತೀವ್ರ ಗಾಯ
Update: 2021-08-27 10:26 IST
ಕಾಸರಗೋಡು, ಆ.27: ನೆಟ್ ವರ್ಕ್ ಸಮಸ್ಯೆಯಿಂದ ಮೊಬೈಲ್ ರೇಂಜ್ ಸಿಗದಿರುವ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿ ಆಲಿಸುವುದಕ್ಕಾಗಿ ಮರವೇರಿದ್ದ ವಿದ್ಯಾರ್ಥಿಯೋರ್ವ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಕಣ್ಣೂರು ಕಣ್ಣವ ಬಳಿ ನಡೆದಿದೆ.
ಕಣ್ಣವ ನಿವಾಸಿ ಅನಂತು ಬಾಬು ಗಾಯಾಳು ವಿದ್ಯಾರ್ಥಿ. ಈತ ಪ್ಲಸ್ ವನ್ ಅಲೋಟ್ ಮೆಂಟ್ ವೀಕ್ಷಿಸಲು ಗುರುವಾರ ಸಂಜೆ ಮನೆ ಸಮೀಪದ ಮರವನ್ನೇರಿ ರೆಂಬೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ಇದರಿಂದ ಅನಂತುವಿನ ಬೆನ್ನು ಮೂಳೆಗೆ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವರನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕಾಲನಿಯಲ್ಲಿ 72 ರಷ್ಟು ವಿದ್ಯಾರ್ಥಿಗಳಿದ್ದಾರೆ. ಇವರು ಆನ್ ಲೈನ್ ತರಗತಿಗೆ ರೇಂಜ್ ಹುಡುಕಿಕೊಂಡು ಗುಡ್ಡ ಬೆಟ್ಟ ಸುತ್ತಾಡಬೇಕು. ಇಲ್ಲದಿದ್ದಲ್ಲಿ ಮರವೇರಬೇಕಾದ ಅನಿವಾರ್ಯ ಸ್ಥಿತಿಯಿದೆ.