ಇನ್‌ ಸ್ಪೆಕ್ಟರ್ ಪುತ್ರನ ಸೈಕಲ್ ಕಳವು: ಪ್ರಕರಣ ಬೆನ್ನತ್ತಿದಾಗ 9 ಕೇಸು ಬಯಲು

Update: 2021-08-30 17:00 GMT

ಮಂಗಳೂರು, ಆ.30: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಇನ್‌ಸ್ಪೆಕ್ಟರ್‌ವೊಬ್ಬರ ಪುತ್ರನ ಸೈಕಲ್ ಕಳವು ಪ್ರಕರಣವನ್ನು ಬೆನ್ನತ್ತಿ ಹೋದ ಮಂಗಳೂರು ಪೊಲೀಸರು 9 ಸೈಕಲ್ ಕಳವು ಪ್ರಕರಣಗಳನ್ನು ಭೇದಿಸಿದ್ದಾರೆ.

ಕಳವು ಪ್ರಕರಣ ಬೆನ್ನತ್ತಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ‘ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹನುಮಂತ (35), ಶಿವಮೊಗ್ಗ ಜಿಲ್ಲೆಯ ಮಂಜುರಾಜ್ (29), ಮಂಗಳೂರು ತಾಲೂಕಿನ ಕುತ್ತಾರಿನ ಶಂಕರ ಶೆಟ್ಟಿ (66) ಬಂಧಿತರು.

ಇವರು ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಹಣವಿಲ್ಲದ ವೇಳೆ ಸೈಕಲ್‌ಗಳನ್ನು ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದರು. ಸುಮಾರು 20 ಸಾವಿರ ಮೌಲ್ಯದ ಸೈಕಲನ್ನು ಕದ್ದು 500- 1000 ರೂ.ಗೆ ಮಾರುತ್ತಿದ್ದರು. ಪೊಲೀಸರು ಇವರ ಬಳಿಯಿಂದ 1.5 ಲಕ್ಷ ರೂ. ಮೌಲ್ಯದ 9 ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರಿನ ಸಂಚಾರ ಉತ್ತರ ಠಾಣೆಯ ಇನ್‌ಸ್ಪೆಕ್ಟರ್ ಶರೀಫ್ ಅವರ ಪುತ್ರನ ಸೈಕಲ್‌ನ್ನು ಅಪಾರ್ಟ್ಮೆಂಟ್‌ನ ಪಾರ್ಕಿಂಗ್ ಏರಿಯಾದಿಂದ ಇತ್ತೀಚೆಗೆ ಕಳವು ಮಾಡಲಾಗಿತ್ತು. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News