ಅ.23ರಂದು ಉಡುಪಿಯಲ್ಲಿ ಮೆಗಾ ಲೋಕ್ ಅದಾಲತ್
ಉಡುಪಿ, ಸೆ.3: ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಅ.23ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ.
ವೈವಾಹಿಕ ಪ್ರಕರಣ, ಕುಟುಂಬ ಕಲಹ, ಚೆಕ್ ಬೌನ್ಸ್, ವಾಹನ ಅಪಘಾತ ಹಾಗೂ ವಿಮಾ ಪ್ರಕರಣ ಸೇರಿದಂತೆ ರಾಜಿ ಸಂಧಾನದ ಮೂಲಕ ಬಗೆಹರಿಸ ಬಲ್ಲ ಪ್ರಕರಣಗಳನ್ನು ಲೋಕ್ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗುವುದು. ಅಕ್ರಮ ಮರಳು ಮತ್ತು ಕಲ್ಲು ಸಾಗಾಣಿಕೆ ಮಾಡುವಾಗ ಜಪ್ತಿ ಮಾಡಿದ ವಾಹನಗಳನ್ನು ದಂಡ ಕಟ್ಟುವ ಮೂಲಕ ಲೋಕ್ ಅದಾಲತ್ನಲ್ಲಿ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು.
ನ್ಯಾಯಾಧೀಶರು, ವಿವಿಧ ಇಲಾಖೆಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸ ಲಿರುವರು. ಕೋವಿಡ್ ಸಂದರ್ಭದಲ್ಲಿ ಲೋಕ್ ಅದಾಲತ್ ಮೂಲಕ ಹಲವು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಗಿದೆ. ಕಳೆದ ಆಗಸ್ಟ್ ನಲ್ಲಿ ನಡೆದ ಲೋಕ್ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ 3065 ಪ್ರಕರಣಗಳು ಹಾಗೂ 179 ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಲಾಗಿದೆ.
ಲೋಕ್ ಅದಾಲತ್ಗೆ ಸಂಬಂಧಿಸಿದಂತೆ ಪ್ರತೀ ದಿನ ಎಲ್ಲಾ ನ್ಯಾಯಾಲಯ ಗಳಲ್ಲಿ ಪೂರ್ವಭಾವಿ ಬೈಠಕ್ಗಳು ನಡೆಯುತ್ತಿವೆ. ಕಕ್ಷಿದಾರರು ನ್ಯಾಯಾಲಯ ದಲ್ಲಿ ವಿಚಾರಣೆಗೆ ಇರುವ ಪ್ರಕರಣಗಳನ್ನು ತಮ್ಮ ವಕೀಲರ ಮೂಲಕ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ ಮೂಲಕ ಮಾಹಿತಿ ಪಡೆದು ಲೋಕ್ ಅದಾಲತ್ನಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ.
ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸ ಲಾಗುವುದು. ಕಕ್ಷಿದಾರರು ಆನ್ಲೈನ್, ವೀಡಿಯೋ ಕಾನ್ಪರೆನ್ಸ್ ಹಾಗೂ ಎಲೆಕ್ಟಾನಿಕ್ ಮಾಧ್ಯಮಗಳ ಮೂಲಕ ಹಾಗೂ ಖುದ್ದಾಗಿ ಹಾಜರಾಗುವ ಮೂಲಕ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ಆಯಾ ತಾಲೂಕಿನ ಕಾನೂನು ಸೇವಾ ಸಮಿತಿ ಮತ್ತು ದೂರವಾಣಿ ಸಂಖ್ಯೆ: 0820-2523355/9480898702ನ್ನು ಸಂಪರ್ಕಿಸ ಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಕಟಣೆ ತಿಳಿಸಿದೆ.