ಕರಾವಳಿಯಲ್ಲಿ ಸೌಹಾರ್ದ-ಸಾಮರಸ್ಯ ಕುಸಿತ: ಚಂದ್ರಕಲಾ ನಂದಾವರ
ಮಂಗಳೂರು, ಸೆ.3: ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲು ಎಲ್ಲ ಧರ್ಮಗಳ ನಡುವೆ ಅತ್ಯಂತ ಹೆಚ್ಚು ಸೌಹಾರ್ದ ಮತ್ತು ಸಾಮರಸ್ಯ ಕಂಡು ಬರುತ್ತಿತ್ತು. ಆದರೆ ಪ್ರಸಕ್ತ ದಿನಮಾನಗಳಲ್ಲಿ ಅದು ಕಾಣ ಸಿಗುತ್ತಿಲ್ಲ. ಕರಾವಳಿಯಲ್ಲಿ ಸೌಹಾರ್ದ-ಸಾಮರಸ್ಯವು ಕುಸಿತ ಕಂಡಿದೆ ಎಂದು ಸಾಹಿತಿ ಚಂದ್ರಕಲಾ ನಂದಾವರ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಸಹಕಾರಿ ಸದನದ ಶಾಂತಿ ಪ್ರಕಾಶನ ಸಭಾಂಗಣದಲ್ಲಿ ಮುಸ್ಲಿಂ ಲೇಖಕರ ಸಂಘದಿಂದ ದಿ. ಯು.ಟಿ. ಫರೀದ್ ಸ್ಮರಾಣಾರ್ಥ 2019ನೇ ಸಾಲಿನ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರಾವಳಿಯ ಭಾಗದಲ್ಲಿ ನಾವು ಮುಸ್ಲಿಮರ ಮನೆಗಳಿಗೆ ತೆರಳಿ ಹಬ್ಬಗಳನ್ನು ಆಚರಿಸಿ, ಪರಸ್ಪರ ಸಂತೋಷದಿಂದ ಪಾಲ್ಗೊಳ್ಳುತ್ತಿದ್ದೆವು. ಪ್ರತಿಯಾಗಿ ಮುಸ್ಲಿಮರೂ ಹಿಂದೂಗಳೊಂದಿಗೆ ಸಹೋದತ್ವದಿಂದ ಇದ್ದರು. ಆದರೆ ಇತ್ತೀಚೆಗೆ ಕರಾವಳಿಯಲ್ಲಿ ಧರ್ಮಗಳ ನಡುವೆ ಬಿರುಕು ಕಾಣಿಸಿಕೊಳ್ಳಲು ಶುರುವಾಗಿದೆ. ಇದಕ್ಕೆ ಕಾರಣರಾದವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು ಎಂದು ಅವರು ತಾಕೀತು ಮಾಡಿದ್ದಾರೆ.
ಹೆಣ್ಣು ಹೆತ್ತ ಪೋಷಕರು ಸಮಾಜಮುಖಿಯಾಗಲಿ: ಯಾವುದೇ ಧರ್ಮದಲ್ಲಿ ಪೋಷಕರು ವಿಚಾರವಂತರಾದರೆ, ಸಮಾಜಮುಖಿ ಮನಸ್ಸಿನವ ರಾದರೆ ಅವರ ಹೆಣ್ಣುಮಕ್ಕಳು ತಮ್ಮ ಬದುಕು ಕಟ್ಟಿಕೊಳ್ಳುವುದಷ್ಟೇ ಅಲ್ಲದೆ, ಉಳಿದವರ ಬಾಳನ್ನೂ ಬೆಳಗಿಸಲಿದ್ದಾರೆ ಎಂದು ಚಂದ್ರಕಲಾ ನಂದಾವರ ತಿಳಿಸಿದ್ದಾರೆ.
ಹಿಂದೂ-ಮುಸ್ಲಿಂ ಎರಡೂ ಧರ್ಮಗಳಲ್ಲಿ ಮಹಿಳೆಯರನ್ನು ಸಕಾರಾತ್ಮಕ ಹಾಗೂ ನಕಾರಾತ್ಮಕವಾಗಿ ನೋಡುವ ವೈಖರಿಯು ಇತಿಹಾಸದಲ್ಲೂ ಇದೆ; ಪ್ರಸಕ್ತ ದಿನಮಾನಗಳಲ್ಲೂ ಇದೆ. ಇದನ್ನು ನಿರಂತರವಾಗಿ ಉಲ್ಲೇಖಿಸುತ್ತಾ ಬಂದಿದ್ದೇನೆ. ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯವಾಹಿನಿಗೆ ಬರಬೇಕು. ತಮ್ಮ ಆಸಕ್ತ ಕ್ಷೇತ್ರಗಳಲ್ಲಿ ಅವಿರತವಾಗಿ ಗುರುತಿಸಿಕೊಳ್ಳಬೇಕು ಎಂದರು.
ಹೆಣ್ಣುಮಕ್ಕಳಿಗೆ ಪೋಷಕರು ಎಲ್ಲ ವಿಷಯಗಳಲ್ಲೂ ಪ್ರೋತ್ಸಾಹಿಸಬೇಕು. ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ದಿ.ಮುಮ್ತಾಝ್ ಬೇಗಂ ಅವರ ಮನೆಯವರು ಕೂಡ ಅವರಿಗೆ ಎಲ್ಲ ಸಂದರ್ಭದಲ್ಲಿ ಸಹಕರಿಸಿದ್ದರು. ಹಾಗಾಗಿಯೇ ಮುಮ್ತಾಝ್ ಎಲ್ಲವನ್ನೂ ಸಾಧಿಸಿ ತೋರಿಸಿದರು. ಮುಗ್ಧತೆಯ ಪ್ರತಿರೂಪವಾಗಿದ್ದ ಮುಮ್ತಾಝ್ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇಆದ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಎನ್ನುವುದು ಜೀವನದ ಅನುಭವದ ದ್ರವ್ಯ. ಇದನ್ನು ಮುಮ್ತಾಝ್ ಅವರ ಸಾಹಿತ್ಯಿಕ ಬರಹದಲ್ಲಿ ಕಾಣಬಹುದಾಗಿದೆ ಎಂದರು. ಕೊನೆಗೆ ಮುಮ್ತಾಝ್ ಅವರ ಕೃತಿಗಳ ಬಗ್ಗೆ ವಿಶ್ಲೇಷಿಸಿದರು.
2019ನೇ ಸಾಲಿನ ಮುಸ್ಲಿಂ ಸಾಹಿತ್ಯ ಪ್ರಶಸ್ತಿಯನ್ನು ದಿ.ಮುಮ್ತಾಝ್ ಬೇಗಂ ಅವರ ಪುತ್ರ ಜಹೀರ್ ಅಹ್ಮದ್ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಮುಸ್ಲಿಂ ಮಹಿಳಾ ಸಾಹಿತ್ಯ ಸಂಘದ ಸಮಿನಾ ಅಫ್ಸನಾ, ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ತೀರ್ಪುಗಾರರಾದ ಅಬ್ದುಲ್ ರಝಾಕ್ ಅನಂತಾಡಿ, ಅಬ್ದುಲ್ ರಹಿಮಾನ್ ಕುತ್ತೆತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಹಮ್ಮದ್ ಸಲೀಂ ಬೋಳಂಗಡಿ ಪ್ರಾರ್ಥಿಸಿದರು. ಮುಸ್ಲಿಂ ಲೇಖಕರ ಸಂಘದ ಜೊತೆ ಕಾರ್ಯದರ್ಶಿ ಎ.ಕೆ. ಕುಕ್ಕಿಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.
ಕವಿಗೋಷ್ಠಿ: ಕವಿಗೋಷ್ಠಿಯನ್ನು ಸಾಹಿತಿ ಮುಹಮ್ಮದ್ ಬಡ್ಡೂರು ಉದ್ಘಾಟಿಸಿ, ಕವಿಗೋಷ್ಠಿಯಲ್ಲಿ ಕವನ ಮಂಡಿಸಿದರು. ಪ್ರಶಾಂತಿ ಶೆಟ್ಟಿ ಇರುವೈಲು (ತುಳು), ರೇಮಂಡ್ ಡಿಕುನ್ಹ (ಕೊಂಕಣಿ), ಸಿಹಾನ ಬಿ.ಎಂ. (ಕನ್ನಡ) ಕವನ ಮಂಡಿಸಿದರು.