×
Ad

ಪ್ರಾರ್ಥನಾ ಸ್ಥಳಕ್ಕೆ ದಾಳಿ: ವಿವಿಧ ಸಂಘಟನೆಗಳಿಂದ ವ್ಯಾಪಾಕ ಖಂಡನೆ

Update: 2021-09-11 20:17 IST

ಉಡುಪಿ, ಸೆ.11: ಕುಕ್ಕುಂದೂರು ಗ್ರಾಮದ ನಕ್ರೆ ಎಂಬಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಿಂಜಾವೇ ಕಾರ್ಯಕರ್ತರು ನಡೆಸಿದ ದಾಳಿಯನ್ನು ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಕ್ರೈಸ್ತ ಒಕ್ಕೂಟ ಖಂಡನೆ: ಕ್ರೈಸ್ತ ಸಂಸ್ಥೆಗೆ ಸೇರಿದ ಸ್ಥಳದಲ್ಲಿ ಕೈಸ್ತರು ಮತಾಂತರ ಮಾಡುತ್ತಿದ್ದಾರೆಂದು ಎಂದು ಸುಳ್ಳು ಆರೋಪ ಹೊರಿಸಿ ಪ್ರಾರ್ಥನಾ ಸ್ಥಳಕೆ ಅಕ್ರಮ ಪ್ರವೇಶಿಸಿ ಮಹಿಳೆಯರು ಮಕ್ಕಳು ಮತ್ತು ಇತರರ ಮೇಲೆ ಹಲ್ಲೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿರುವ ಆರೋಪಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರಗಿಸಬೇಕು ಎಂದು ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಒತ್ತಾಯಿಸಿದ್ದಾರೆ.

‘ಕಾರ್ಕಳ ಚಲೋ’ ಎಚ್ಚರಿಕೆ: ಮತಾಂತರದ ಸುಳ್ಳು ಆರೋಪ ಹೊರಿಸಿ ಕಾರ್ಕಳದ ಪ್ರಾರ್ಥನ ಮಂದಿರದ ಮೇಲೆ ನಡೆಸಿರುವ ದಾಳಿಯನ್ನು ಸಾಲಿ ಡಾರಿಟಿ ಯೂತ್‌ಮೂವ್ಮೆಂಟ್ ಉಡುಪಿ ತೀವ್ರವಾಗಿ ಖಂಡಿಸಿದೆ.

ಇದು ಸಂವಿಧಾನ ನೀಡಿದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಸೂಕ್ತ ಕ್ರಮಕೈಗೊಂಡು ಬಂಧಿಸಬೇಕು. ಸಂತ್ರಸ್ತರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯ ಬೇಕು. ಇಲ್ಲದಿದ್ದರೆ ಎಲ್ಲ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ನ್ಯಾಯಕ್ಕಾಗಿ ಆಗ್ರಹಿಸಿ ಕಾರ್ಕಳ ಚಲೋ ಹಮ್ಮಿಕೊಳ್ಳಲಾಗುವುದೆಂದು ಸಾಲಿ ಡಾರಿಟಿ ಜಿಲ್ಲಾ ಸಂಚಾಲಕ ಯಾಸೀನ್ ಕೋಡಿಬೆಂಗ್ರೆ ಎಚ್ಚರಿಕೆ ನೀಡಿದ್ದಾರೆ.

ವೆರೋನಿಕಾ ಕರ್ನೆಲಿಯೊ: ಕಾರ್ಕಳದಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿ ದಾಂಧಲೆ ಎಬ್ಬಿಸಿರುವುದ ಖಂಡನೀಯ. ಪ್ರಾರ್ಥನೆಗೆ ತೆರಳಿದವರ ಮೇಲೆ ದಾಳಿ ನಡೆಸುವ ಬದಲು ಅವರ ಮನವೊಲಿಸಿ ಸಮಸ್ಯೆ ಅರಿಯುವ ಕೆಲಸ ಮಾಡಬೇಕಿತ್ತು ಎಂದು ಕ್ರೈಸ್ತ ನಾಯಕಿ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಪಿಎಫ್‌ಐ ಖಂಡನೆ: ಪ್ರಾರ್ಥನಾ ಕೇಂದ್ರದ ಮೇಲೆ ದಾಳಿ ನಡೆಸಿ ಶಾಂತಿ ಕದಡಿದ ಮತ್ತು ಒಂದು ನಿರ್ದಿಷ್ಟ ಸಮುದಾಯದ ನಡುವೆ ಭೀತಿ ಹುಟ್ಟಿಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ಸಮರ್ಪಕ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಆಗ್ರಹಿಸಿದ್ದಾರೆ.

ಹಿಂಜಾವೇ ನಿಷೇಧಕ್ಕೆ ಆಗ್ರಹ: ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಹಾಗೂ ಸಮಾಜದ ಶಾಂತಿ ಹಾಗೂ ಸೌಹಾರ್ದತೆಯನ್ನು ಕೆಡಿಸಲು ನಿರಂತರ ಪ್ರಯತ್ನ ಪಡುತ್ತಿರುವ ಹಿಂದೂ ಜಾಗರಣ ವೇದಿಕೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಸಚಿರ ಊರಲ್ಲಿ ಕಾನೂನಿಗೆ ಬೆಲೆ ಇಲ್ಲವೇ ?

ಕಾರ್ಕಳದಲ್ಲಿ ಇತ್ತೀಚೆಗೆ ಪ್ರಾರ್ಥನಾ ಮಂದಿರದ ಮೇಲೆ ನಡೆದ ದಾಳಿಯನ್ನು ಯಾವುದೇ ಕಾನೂನು ಬಾಹಿರ ಚಟುವಟಿಕೆ ಎಲ್ಲೂ ಕಂಡು ಬಂದರೆ ಸಮೀಪದ ಪೋಲಿಸ್ ಠಾಣೆಗೆ ತಿಳಿಸುವುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. ಅದನ್ನು ಹೊರತು ಪಡಿಸಿ ತಂಡೋಪತಂಡವಾಗಿ ಹೋಗಿ ದಾಳಿ ನಡೆಸಲು ಹಿಂದೂ ಜಾಗರಣಾ ವೇದಿಕೆಯವರಿಗೆ ಅಧಿಕಾರ ನೀಡಿದವರಾರು? ಬಿಜೆಪಿ ಸರಕಾರದ ಮೇಲೆ ಹಾಗೂ ಸಚಿವ ಸುನೀಲ್ ಮೇಲೆ ಇವರಿಗೆ ನಂಬಿಕೆ ಇಲ್ಲವೇ ಅಥವಾ ಸರಕಾರವೇ ತಮಗೆ ಕಾಪಾಡುತ್ತದೆ ಎಂಬ ಧೈರ್ಯದಲ್ಲಿ ಇವರು ಕಾನೂನನ್ನು ಕೈಗೆತ್ತಿಕೊಂಡರಾ? ಎಂದೂ ಸಹಬಾಳ್ವೆ ಸಂಚಾಲಕ ಅಮೃತ್ ಶೆಣೈ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News