ಪಾದ್ರಿಯಿಂದ ಮುಸ್ಲಿಂ ವಿರೋಧಿ ಭಾಷಣ: ಪ್ರಾರ್ಥನಾ ಹಾಲ್‌ ನಿಂದ ಹೊರನಡೆದ ಕೇರಳದ ಕ್ರೈಸ್ತ ಸನ್ಯಾಸಿನಿಯರು

Update: 2021-09-13 06:54 GMT
Photo: Thenewsminute

ತಿರುವನಂತಪುರ: ಪಾಲಾ ಬಿಷಪ್ ಜೋಸೆಫ್ ಕಲ್ಲರಂಗಟ್ ಅವರ 'ನಾರ್ಕೋಟಿಕ್ ಜಿಹಾದ್' ಹೇಳಿಕೆಯು  ಕೇರಳದಲ್ಲಿ ಸಂಚಲನ ಸೃಷ್ಟಿಸುತ್ತಿದ್ದರೂ ಸಹ, ಕೊಟ್ಟಾಯಂನ ಕುರವಿಲಂಗಡದ ನಾಲ್ವರು ಕ್ರೈಸ್ತ ಸನ್ಯಾಸಿಗಳು ಇನ್ನೊಬ್ಬ ಕ್ರಿಶ್ಚಿಯನ್ ಪಾದ್ರಿಯೊಬ್ಬರು ಮುಸ್ಲಿಮರ ವಿರುದ್ಧ ದ್ವೇಷದ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದ್ವೇಷ ಭಾಷಣಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿರುವ ಸನ್ಯಾಸಿಗಳು ಪ್ರಾರ್ಥನಾ ಮಂದಿರದಿಂದ ಹೊರನಡೆದಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಈ ಕ್ರೈಸ್ತ ಸನ್ಯಾಸಿನಿಯರು ಈ ಹಿಂದೆ ಅತ್ಯಾಚಾರ ಪ್ರಕರಣದ ಆರೋಪಿ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಪ್ರತಿಭಟಿಸಲು ಮುಂದೆ ಬಂದಿದ್ದರು.
 
ಸೇಂಟ್ ಫ್ರಾನ್ಸಿಸ್ ಆಫ್ ಪೆನನ್ಸ್ ನ ಮೂರನೇ ಕ್ರಮಾಂಕದ ಪಾದ್ರಿ ರಾಜೀವ್ ರವಿವಾರ ಕುರವಿಲಂಗಡ್ ಸೇಂಟ್ ಫ್ರಾನ್ಸಿಸ್ ಮಿಷನ್ ಹೋಮ್ ಒಳಗಿನ ಪ್ರಾರ್ಥನಾ ಮಂದಿರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಭಾಷಣ ಮಾಡಿದ್ದಾರೆ ಎಂದು ಸೆಪ್ಟೆಂಬರ್ 13 ರ ರವಿವಾರ ಮಾಧ್ಯಮಗಳನ್ನು ಉದ್ದೇಶಿಸಿ ಕ್ರೈಸ್ತ ಸನ್ಯಾಸಿನಿಯರು ಆರೋಪಿಸಿದರು. 

'ಲವ್ ಜಿಹಾದ್ ಹಾಗೂ  ಮಾದಕವಸ್ತು ಜಿಹಾದ್' ಕುರಿತು ಮಾರ್ ಜೋಸೆಫ್ ಕಲ್ಲರಂಗತ್ ಅವರ ಹೇಳಿಕೆಗಳನ್ನು ಬೆಂಬಲಿಸದಂತೆ ಜನತೆಗೆ ಕ್ರೈಸ್ತ ಸನ್ಯಾಸಿಯರು ವಿನಂತಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಸ್ಟರ್ ಅನುಪಮಾ, "ಇಂದು (ಸೆಪ್ಟೆಂಬರ್ 12) ಪ್ರಾರ್ಥನೆಯ ಸಮಯದಲ್ಲಿ ಪಾದ್ರಿ  ಅವರು ಪಾಲಾ ಬಿಷಪ್ ಅವರನ್ನು ಬೆಂಬಲಿಸುವ ಭಾಷಣ ಮಾಡಿದರು. ಇದು ಕೋಮುವಾದದ ಬೀಜಗಳನ್ನು ಬಿತ್ತಿತು. ಭಾಷಣದಲ್ಲಿ ಪಾದ್ರಿಯವರು  ತರಕಾರಿಗಳಂತಹ ವಸ್ತುಗಳನ್ನು ಮುಸ್ಲಿಮರಿಂದ ಖರೀದಿಸಬಾರದು ಎಂದು ಹೇಳಿದರು ಹಾಗೂ ಅವರು ಓಡಿಸುವ ಆಟೋರಿಕ್ಷಾಗಳಲ್ಲಿ ಪ್ರಯಾಣಿಸದಂತೆ ಸಭೆಯನ್ನು ಕೇಳಿಕೊಂಡರು. ಅವರು ಇಂತಹ ಹೇಳಿಕೆಗಳನ್ನು ನೀಡುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಮುಸ್ಲಿಮರ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು. ಇಂದು, ನಾವು ಪ್ರತಿಕ್ರಿಯಿಸದೇ ಇರಲು ಸಾಧ್ಯವಿಲ್ಲ ಹಾಗೂ  ನಾವು ಇಬ್ಬರು ಪ್ರಾರ್ಥನಾ ಹಾಲ್ ನಿಂದ ಹೊರಬಂದೆವು’’ ಎಂದರು.

“ಕ್ರಿಸ್ತನು ನಮಗೆ ಕಲಿಸಿದ್ದು ಎಲ್ಲರನ್ನು ಪ್ರೀತಿಸುವುದು. ನೆರೆಯವರನ್ನು ಪ್ರೀತಿಸುವುದು ಹಾಗೂ  ಕೋಮುವಾದವನ್ನು ಬಿತ್ತುವುದಲ್ಲ. ಕ್ರಿಸ್ತನು ನಮಗೆ ಏನನ್ನು ಬೋಧಿಸುತ್ತಾರೋ, ಅದಕ್ಕೆ ವಿರುದ್ಧವಾದ ವಿಷಯಗಳನ್ನು ಪಾದ್ರಿ ಹೇಳುತ್ತಿದ್ದಾಗ ನಮಗೆ ಅದನ್ನು ನೋಡಲಾಗಲಿಲ್ಲ. ಹೀಗಾಗಿ ನಾವು ಪ್ರತಿಕ್ರಿಯಿಸಿದ್ದೇವೆ ”ಎಂದು ಅವರು ಹೇಳಿದರು. 

2018 ರಲ್ಲಿ ಕೊಚ್ಚಿಯಲ್ಲಿ ಬಿಷಪ್ ಫ್ರಾಂಕೊ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕ್ರೈಸ್ತ ಸನ್ಯಾಸಿನಿಯರು ಬಹಿರಂಗ ಪ್ರತಿಭಟನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಸಂತ್ರಸ್ತ ಕ್ರೈಸ್ತ ಸನ್ಯಾಸಿನಿಯ ಬೆಂಬಲಕ್ಕೆ ಕ್ರೈಸ್ತ ಸನ್ಯಾಸಿನಿಯರು ಐತಿಹಾಸಿಕ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮವಾಗಿ, ಮೂರು ದಿನಗಳ ವಿಚಾರಣೆಯ ನಂತರ ಸೆಪ್ಟೆಂಬರ್ 2018 ರಲ್ಲಿ ಫ್ರಾಂಕೊನನ್ನು ಬಂಧಿಸಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News