ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗೆ 900 ಕೋಟಿ ರೂ. ದಿಢೀರ್ ಠೇವಣಿ ಜಮೆ !

Update: 2021-09-16 05:33 GMT
ಸಾಂದರ್ಭಿಕ ಚಿತ್ರ (source: PTI)

ಪಾಟ್ನಾ, ಸೆ.16: ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗೆ ದಿಢೀರನೇ 900 ಕೋಟಿ ರೂ. ಜಮೆಯಾಗಿರುವುದು ಕುಟುಂಬದವರಿಗೆ ಮಾತ್ರವಲ್ಲದೇ ಇಡೀ ಗ್ರಾಮಕ್ಕೇ ಅಚ್ಚರಿ ತಂದಿದೆ.

ಗುರುಚಂದ್ರ ವಿಶ್ವಾಸ್ ಮತ್ತು ಆಸೀತ್ ಕುಮಾರ್ ಎಂಬವರ ಖಾತೆಗೆ 900 ಕೋಟಿ ರೂಪಾಯಿ ಜಮೆ ಆಗಿದೆ ಎಂದು ಲೈವ್‌ ಹಿಂದೂಸ್ತಾನ್ ವರದಿ ಮಾಡಿದೆ. ಇಬ್ಬರು ಮಕ್ಕಳು ಬಿಹಾರದ ಕತಿಹಾರ್ ಜಿಲ್ಲೆಯ ಬಗೂರಾ ಪಂಚಾಯ್ತಿಯ ಪಸ್ತಿಯಾ ಗ್ರಾಮದವರು.

ಇಬ್ಬರು ಮಕ್ಕಳು ಸ್ಥಳೀಯ ಭಾರತೀಯ ಸ್ಟೇಟ್ ಬ್ಯಾಂಕ್‌ನ ಸ್ಥಳೀಯ ಕೇಂದ್ರೀಕೃತ ಸಂಸ್ಕರಣಾ ಕೇಂದ್ರ(ಸಿಪಿಸಿ)ಕ್ಕೆ ಭೇಟಿ ನೀಡಿ, ರಾಜ್ಯ ಸರ್ಕಾರ ಮಕ್ಕಳ ಸಮವಸ್ತ್ರಕ್ಕೆ ಹಣ ಜಮೆ ಮಾಡಿದೆಯೇ ಎಂದು ತಿಳಿದುಕೊಳ್ಳಲು ಬಯಸಿದ್ದರು. ಆಗ ಈ ದೊಡ್ಡ ಮೊತ್ತದ ಹಣ ಜಮೆಯಾಗಿರುವುದು ಪತ್ತೆಯಾಯಿತು.

ಮಕ್ಕಳು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು. ವಿಶ್ವಾಸ್ ಖಾತೆಗೆ 60 ಕೋಟಿ ರೂಪಾಯಿ ಜಮೆ ಆಗಿದ್ದರೆ, ಕುಮಾರ್ ಖಾತೆಗೆ 900 ಕೋಟಿ ರೂಪಾಯಿ ಜಮೆ ಆಗಿದೆ. ಇದರಿಂದ ಅಚ್ಚರಿಗೊಂಡಿರುವ ಶಾಖೆಯ ವ್ಯವಸ್ಥಾಪಕ ಮನೋಜ್ ಗುಪ್ತಾ, ಹಣವನ್ನು ವಾಪಸ್ ಪಡೆಯದಂತೆ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಬ್ಯಾಂಕಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಖಗಾರಿಯಾ ಜಿಲ್ಲೆಯಲ್ಲಿ ಇಂಥದ್ದೇ ಘಟನೆ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ರಂಜಿತ್ ದಾಸ್ ಎಂಬ ಖಾಸಗಿ ಟ್ಯೂಷನ್ ಶಿಕ್ಷಕರ ಖಾತೆಗೆ ಬ್ಯಾಂಕ್‌ನ ತಾಂತ್ರಿಕ ದೋಷದಿಂದಾಗಿ 5.5 ಲಕ್ಷ ರೂ. ಜಮೆ ಆಗಿತ್ತು. ಆ ವ್ಯಕ್ತಿಗೆ ನೋಟಿಸ್ ನೀಡಿದ ಬಳಿಕವೂ ಹಣ ಮರಳಿಸಲು ಅವರು ನಿರಾಕರಿಸಿದ್ದರು. ಸರಕಾರ ಕಳುಹಿಸಿದ ಹಣವನ್ನು ವಸೂಲಿ ಮಾಡುವ ಕುತಂತ್ರ ಇದಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು.

"ಕೋವಿಡ್ ಹಾಗೂ ಲಾಕ್‌ಡೌನ್ ಕಾರಣದಿಂದ ಸರ್ಕಾರ ನನಗೆ ಹಣ ಕಳುಹಿಸಿದೆ ಎಂದು ನಾನು ಭಾವಿಸಿದ್ದೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್ ವಂಚನೆಗಳು ನಡೆಯುತ್ತಿದ್ದು, ಈ ಕಾರಣದಿಂದ ನಾನು ಹಣ ವಾಪಸ್ ಮಾಡಿಲ್ಲ. ನಾನು 1,60,970 ರೂಪಾಯಿ ವೆಚ್ಚ ಮಾಡಿದ್ದೆ. ನನ್ನ ಅಗತ್ಯದ ಸಂದರ್ಭದಲ್ಲಿ ಸರ್ಕಾರ ಹಣ ಕಳುಹಿಸಿದೆ ಎಂದು ಖುಷಿಯಾಗಿದ್ದೆ. ಇಲ್ಲದಿದ್ದರೆ ನನ್ನ ಖಾಲಿ ಖಾತೆಗೆ ಹಣ ಎಲ್ಲಿಂದ ಬರಬೇಕು" ಎಂದು ದಾಸ್ ಪೊಲೀಸರಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News