ಎನ್‌ಕೌಂಟರ್ ಬೆದರಿಕೆಯ 2ನೇ ದಿನಗಳಲ್ಲಿ ಆರೋಪಿ ಶವವಾಗಿ ಪತ್ತೆ !

Update: 2021-09-17 04:22 GMT

ಹೈದರಾಬಾದ್ : ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡುವುದಾಗಿ ತೆಲಂಗಾಣ ಸಚಿವ ಬೆದರಿಕೆ ಹಾಕಿದ ಎರಡೇ ದಿನಗಳಲ್ಲಿ ಆತನ ಶವ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಹೇಳಿದ್ದಾರೆ.

"ಸದ್ಯಕ್ಕೆ ಇದು ಆತ್ಮಹತ್ಯೆಯ ಸ್ಪಷ್ಟ ಪ್ರಕರಣ ಎನಿಸುತ್ತದೆ" ಎಂಬುದಾಗಿ ಆರೋಪಿಯ ಮೃತದೇಹ ಪತ್ತೆಯಾಗಿರುವ ವಾರಂಗಲ್‌ನ ಪೊಲೀಸ್ ಮುಖ್ಯಸ್ಥ ತರುಣ್ ಜೋಶಿ ಸ್ಪಷ್ಟನೆ ನೀಡಿದ್ದಾರೆ. ಪೊಲೀಸರು ಟ್ವಿಟ್ಟರ್‌ನಲ್ಲಿ ಈ ಶವದ ಚಿತ್ರವನ್ನು ಶೇರ್ ಮಾಡಿದ್ದು, ಆತನ ದೇಹದ ಮೇಲಿದ್ದ ಟ್ಯಾಟೂಗಳಿಂದ ಅತ್ಯಾಚಾರ- ಹತ್ಯೆ ಪ್ರಕರಣದ ಶಂಕಿತ ಆರೋಪಿ ಪಲ್ಲಕೊಂಡ ರಾಜುವನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

"ದಯವಿಟ್ಟು ಗಮನಿಸಿ: ಸಿಂಗರೇಣಿ ಕಾಲನಿಯಲ್ಲಿ ಮಗುವಿಗೆ ಲೈಂಗಿಕ ಕಿರುಕುಳ ನೀಡಿ ಹತ್ಯೆ ಮಾಡಿದ ಆರೋಪಿಯ ಶವ ಘನಪುರ ಠಾಣೆಯ ವ್ಯಾಪ್ತಿಯಲ್ಲಿ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಆತನ ದೇಹದ ಮೇಲಿದ್ದ ಗುರುತುಗಳಿಂದ ಈ ಶವ ಆರೋಪಿಯದ್ದೇ ಎಂದು ದೃಢಪಡಿಸಲಾಗಿದೆ" ಎಂದು ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.

ರೈಲ್ವೆ ಉದ್ಯೋಗಿಯೊಬ್ಬರು, ಆರೋಪಿ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ್ದು, ಆತನಿಗೆ ರೈಲು ಡಿಕ್ಕಿ ಹೊಡೆಯುವುದನ್ನು ತಪ್ಪಿಸಿ ಆತನನ್ನು ರಕ್ಷಿಸಲು ಪ್ರಯತ್ನ ನಡೆಸಿದ್ದಾಗಿ ಉದ್ಯೋಗಿ ಹೇಳಿದ್ದಾರೆ ಎಂಧು ತರುಣ್ ಜೋಶಿ ವಿವರಿಸಿದ್ದಾರೆ.

ಆರೋಪಿಯನ್ನು ಪತ್ತೆ ಮಾಡಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡುವುದಾಗಿ ತೆಲಂಗಾಣ ಸಚಿವ ಮಲ್ಲಾರೆಡ್ಡಿ ಮಂಗಳವಾರವಷ್ಟೇ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News