ದೇವಸ್ಥಾನ ಧ್ವಂಸಕ್ಕೆ ರಾಜ್ಯ ಸರಕಾರ ನೇರ ಹೊಣೆ: ರಮಾನಾಥ ರೈ ಆರೋಪ

Update: 2021-09-18 09:43 GMT

ಬಂಟ್ವಾಳ, ಸೆ.18: ಮೈಸೂರು ಜಿಲ್ಲೆಯ ನಂಜನಗೂಡು ಮಹದೇವಮ್ಮ ದೇವಾಲಯವನ್ನು ಧ್ವಂಸ ಮಾಡಿರುವುದಕ್ಕೆ ಬಿಜೆಪಿ ಪಕ್ಷ ಹಾಗೂ ರಾಜ್ಯ ಬಿಜೆಪಿ ಸರಕಾರವೇ ನೇರ ಹೊಣೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ದೇವಸ್ಥಾನ ಹಾಗೂ ಪ್ರಾಥನಾ ಮಂದಿರಗಳನ್ನು ಧ್ವಂಸ ಮಾಡುತ್ತಿರುವ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. 

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ದೇವಸ್ಥಾನಗಳನ್ನು ಧ್ವಂಸ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತಿದೆ. ಸರಕಾರವೇ ಮುಂದೆ ನಿಂತು ದೇವಸ್ಥಾನವನ್ನು ಕೆಡವಿದ ಬಳಿಕ ಜನರ ಆಕ್ರೋಶವನ್ನು ಎದುರಿಸಲು ಆಗದೆ ಅಧಿಕಾರಿಗಳನ್ನು ಹೊಣೆ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

ಚುನಾವಣೆಗಾಗಿ ಹುಟ್ಟಿದ ಬಿಜೆಪಿ ಪಕ್ಷದ್ದು ನಕಲಿ ಹಿಂದುತ್ವ ಆಗಿದೆ. ಚುನಾವಣೆಗಳು ಹತ್ತಿರ ಬಂದಾಗ ಮಾತ್ರ ಬಿಜೆಪಿಯವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಹಿಂದೂ ಸಮಾಜ ಹಾಗೂ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿರುವ ಕಾಂಗ್ರೆಸ್ ನದ್ದು ನಿಜವಾದ ಧಾರ್ಮಿಕ ಹಿಂದುತ್ವ ಆಗಿದೆ. ಬಿಪಿಯದ್ದು ಕೇವಲ ರಾಜಕೀಯ ಹಿಂದುತ್ವ ಆಗಿದೆ ಎಂದರು. 

ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಸನಾತನ ಹಿಂದೂ ಧರ್ಮದ ಹೆಸರನ್ನು ಕೆಡಿಸುತ್ತಿದೆ. ಮತೀಯವಾದ, ಕೋಮುವಾದದ ಮೂಲಕ ರಾಜಕೀಯ ಮಾಡುವ ಪಕ್ಷಗಳು, ಸಂಘಟನೆಗಳ ವಿರುದ್ಧ ಕಾಂಗ್ರೆಸ್ ಪಕ್ಷ ಧ್ವನಿ ಎತ್ತುತ್ತಿದೆ. ಇನ್ನು ಮುಂದೆ ರಾಜ್ಯದಲ್ಲಿ ಒಂದೇ ಒಂದು ದೇವಸ್ಥಾನವನ್ನು ಒಡೆಯಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದರು. 

ದೇವಸ್ಥಾನದ ಧ್ವಂಸ ರಾಜ್ಯ ಸರಕಾರದ ಅಘೋಷಿತ ಕಾರ್ಯಕ್ರಮ. ಧ್ವಂಸಗೊಂಡು ಬಿದ್ದಿರುವ ದೇವಸ್ಥಾನದ ಕಲ್ಲುಗಳ ಅಡಿಯಲ್ಲಿ ಬಿಜೆಪಿಯವರ ಬಾಲ ಸಿಕ್ಕಿಕೊಂಡಿದೆ. ಅದನ್ನು ಬಿಡಿಸಿಕೊಳ್ಳಲು ರಾತ್ರಿ ಹಗಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಸಂಸದರು, ಶಾಸಕರು ನಾಟಕ ಮಾಡುವುದರಲ್ಲಿ ಮುಳುಗಿದ್ದಾರೆ ಎಂದು ಹೇಳಿದರು‌. 

ಬಿಜೆಪಿಯನ್ನು ಅಧಿಕಾರಕ್ಕೆ ತಂದ ಸಂಘ ಪರಿವಾರದ ಸಂಘಟನೆಗಳು ಇಂದು ಬೀದಿಗಿಳಿದು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. 2008ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಬಂದಿದ್ದರೂ ಕಾಂಗ್ರೆಸ್ ಸರಕಾರ ಜನರ ಧಾರ್ಮಿಕ ಭಾವನೆಗೆ ಗೌರವ ನೀಡಿದೆ. ಆದರೆ ಬಿಜೆಪಿ ನೇರವಾಗಿ ದೇವಸ್ಥಾನವನ್ನು ಧ್ವಂಸ ಮಾಡುವ ಕೆಲಸಕ್ಕೆ ಇಳಿದಿದೆ. ಪ್ರಸಕ್ತ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಅವರು ನುಡಿದರು.  

ಪ್ರತಿಭಟನಾ ಸಭೆಯ ಬಳಿಕ ಬಂಟ್ವಾಳ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಿ.ಸಿ.ರೋಡ್, ಬಂಟ್ವಾಳ ತಾಪಂ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್.ಮುಹಮ್ಮದ್, ಮಾಜಿ ತಾಲೂಕ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಅಧ್ಯಕ್ಷರಾದ ವಿಲ್ಮಾ ಮೋರಸ್, ಜಯಂತಿ ವಿ ಪೂಜಾರಿ, ದ.ಕ. ಜಿಲ್ಲಾ ಕಿಶಾನ್ ಘಟಕದ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಬಂಟ್ವಾಳ ಪುರಸಭಾ ಅಧ್ಯಕ್ಷ ಮುಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ, ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಗಂಗಾಧರ್, ಗಾಯತ್ರಿ ಪ್ರಸಾದ್, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಬಡಕಬೈಲ್, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರ, ಇರಾ ಗ್ರಾಪಂ ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಮಾಜಿ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಸುದರ್ಶನ್ ಜೈನ್, ಪದ್ಮನಾಭ ರೈ, ಮುಹಮ್ಮದ್ ನಂದಾವರ, ವೆಂಕಪ್ಪ ಪೂಜಾರಿ, ಪ್ರವೀಣ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News