ದೋಣಿ ದುರಂತದಲ್ಲಿ ಮೃತ ಮೀನುಗಾರ ಶರೀಫ್ ಕುಟುಂಬಕ್ಕೆ ಪರಿಹಾರ ನೀಡಲು ಮನವಿ

Update: 2021-09-18 12:31 GMT

ಮಂಗಳೂರು, ಸೆ.18: ವಾರದ ಹಿಂದೆ ಮೀನುಗಾರಿಕೆಯ ಸಂದರ್ಭ ದೋಣಿ ಮಗುಚಿ ಮೃತರಾದ ಕಸ್ಬಾ ಬೆಂಗ್ರೆಯ ನಿವಾಸಿ ಶರೀಫ್ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಧನ ನೀಡುವಂತೆ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಹರೀಶ್ ಕುಮಾರ್‌ಗೆ ಸಾಂಪ್ರದಾಯಿಕ ಮೀನುಗಾರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ವಯಸ್ಸಾದ ತಾಯಿ, ಸಹೋದರಿ, ಹೆಂಡತಿ, ಮೂರು ಸಣ್ಣ ಮಕ್ಕಳಿರುವ ಕುಟಂಬಕ್ಕೆ ಶರೀಫ್ ದುಡಿಮೆಯೇ ಆಧಾರವಾಗಿತ್ತು. ದಿಢೀರ್ ನಡೆದ ದುರಂತದಿಂದ ಮೃತ ಶರೀಫ್ ಕುಟುಂಬ ಯಾವ ಆಧಾರವೂ ಇಲ್ಲದೆ ಅನಾಥವಾಗಿದೆ. ದುರಂತ ಸಂಭವಿಸಿ ಏಳು ದಿನ ದಾಟಿದರೂ ಸರಕಾರದ ವತಿಯಿಂದ ಯಾವುದೆ ಪರಿಹಾರ ಲಭಿಸಿರುವುದಿಲ್ಲ. ಮಾನವೀಯ ಕಾಳಜಿಯಿಂದ ತಕ್ಷಣ ಸರಕಾರದ ವತಿಯಿಂದ ಪರಿಹಾರ ಧನ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ವಿದ್ಯುತ್ ದೀಪ, ರಸ್ತೆ ಸಂಪರ್ಕ ಸರಿ ಪಡಿಸಲು ಆಗ್ರಹ: ಕಸ್ಬಾ ಬೆಂಗ್ರೆಯ ಸಾಂಪ್ರದಾಯಿಕ, ನಾಡದೋಣಿಗಳು ತಂಗುವ ತೀರದಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದೆ, ಸರಿಯಾದ ರಸ್ತೆ ಸಂಪರ್ಕ ಇಲ್ಲದೆ ಮೀನುಗಾರರು ವೃತ್ತಿ ನಿರ್ವಹಿಸಲು ಸಮಸ್ಯೆಗಳು ಉಂಟಾಗಿದ್ದು, ಅದ್ಯತೆಯಿಂದ ವಿದ್ಯುತ್ ಬೆಳಕು, ರಸ್ತೆ ಸಂಪರ್ಕ ಒದಗಿಸುವಂತೆ ಒತ್ತಾಯಿಸಲಾಯಿತು.

ನಿಯೋಗದಲ್ಲಿ ಪಲ್ಗುಣಿ ನಾಡದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷ ಅಬ್ದುಲ್ ತಯ್ಯೂಬ್, ಸರ್ಫರಾಝ್, ಸಾವಲ್, ಫಹಾಝ್, ಮುದಸ್ಸಿರ್, ಇಮ್ತಿಯಾಝ್, ಇಮ್ರಾನ್, ಸೌಕತ್, ಅಶ್ರಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News